ಚೆನ್ನೈ: ತಮಿಳುನಾಡಿನ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಹಣಬಲದಿಂದ ಗೆದ್ದಿದ್ದಾರೆ ಎಂದು ನಟ ಕಮಲ್ ಹಾಸನ್ ಆರೋಪಿಸಿದ್ದಾರೆ.
ವಾರ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ, ಆರ್.ಕೆ.ನಗರ ಕ್ಷೇತ್ರದ್ದು ‘ಖರೀದಿಸಿದ ಗೆಲುವು’. ಮತದಾರರಿಗೆ ಹಣ ಹಂಚಿ, ಗೆಲುವು ಪಡೆಯಲಾಗಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಈ ಉಪಚುನಾವಣೆ ಒಂದು ಕಪ್ಪು ಚುಕ್ಕೆ ಎಂದು ಬಣ್ಣಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಮತ್ತು ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳಿಬ್ಬರೂ ಮತದಾರರಿಗೆ ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಮತದಾರರಿಗೆ ‘ನೀವು ಮಾರಾಟವಾಗಿದ್ದೀರಿ’ ಎಂದಿದ್ದಾರೆ.
ಕಮಲ್ ಹಾಸನ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ದಿನಕರನ್, ‘ನನ್ನ ಗೆಲುವನ್ನು ಸಹಿಸಲಾಗದೆ ಇಂತಹ ಆರೋಪ ಮಾಡುತ್ತಿದ್ದಾರೆ. ಇದು ಆರ್.ಕೆ. ನಗರ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನ’ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನಿಂದಾಗಿ ಉಪಚುನಾವಣೆ ನಡೆದಿತ್ತು.