ಬೆಂಗಳೂರು: ಕರ್ನಾಟಕ ಮಾರ್ವಾಡಿ ಸಮಾಜ ಹಾಗೂ ಭಗವಾನ್ ಮಹಾವೀರ್ ಜೈನ್ ವಿಕಲಾಂಗ ಸಹಾಯತಾ ಸಮಿತಿ ನಗರದಲ್ಲಿ ಭಾನುವಾರ ಕೃತಕ ಕಾಲು ಜೋಡಣಾ ಶಿಬಿರ ಆಯೋಜಿಸಿತ್ತು.
70 ಜನರಿಗೆ ಕೃತಕ ಕಾಲು ಉಚಿತವಾಗಿ ಜೋಡಣೆ ಮಾಡಲಾಯಿತು. 50 ಮಂದಿಗೆ ಕ್ಯಾಲಿಪರ್ಸ್ ಹಾಗೂ 5 ಮಂದಿಗೆ ಕ್ರಚರ್ಸ್ ನೀಡಲಾಯಿತು. ಕಾಂಗ್ರೆಸ್ ಮುಖಂಡ ಸುಭಾಷ್ ಜಿ.ಅಗರ್ವಾಲ್ ಕೃತಕ ಕಾಲು ವಿತರಿಸಿದರು.
‘ಕೆಲವರು ಆಕಸ್ಮಿಕವಾಗಿ ಕಾಲು ಕಳೆದುಕೊಂಡು ಕೃತಕ ಕಾಲುಗಳ ಖರೀದಿಗೆ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಉಚಿತವಾಗಿ ಕೃತಕ ಕಾಲು ನೀಡುತ್ತೇವೆ’ ಎಂದು ಮಾರ್ವಾಡಿ ಸಮಾಜದ ಯೋಜನಾ ನಿರ್ದೇಶಕ ಬಿಮಲ್ ಕುಮಾರ್ ಸರೋಗಿ ಹೇಳಿದರು.
‘ಈ ಶಿಬಿರಕ್ಕೆ ಸಾವಿರಾರು ಮೈಲಿಗಳಿಂದ ಜನರು ಬಂದಿದ್ದಾರೆ. ಅವರಿಗೆ ಕೃತಕ ಕಾಲುಗಳನ್ನು ಜೋಡಣೆ ಮಾಡಿಸಿ, ಘನತೆಯಿಂದ ಬದುಕಲು ನೆರವಾಗುತ್ತಿದ್ದೇವೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ’ ಎಂದರು.