ಉದಗಮಂಡಲ: ತಮಿಳುನಾಡಿನ ಊಟಿಯಲ್ಲಿ ರಾಜ್ಯ ಸರ್ಕಾರ 32 ಎಕರೆ ಜಾಗದಲ್ಲಿ ₹ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಕರ್ನಾಟಕ ಸಿರಿ' ತೋಟಗಾರಿಕಾ ಉದ್ಯಾನವನ್ನು ಸೋಮವಾರ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈ ಉದ್ಯಾನವು ತಮಿಳುನಾಡು ಮತ್ತು ಕರ್ನಾಟಕದ ಬಾಂಧವ್ಯವನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.
‘ಈ ಜಮೀನನ್ನು ಮೈಸೂರಿನ ರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ತೋಟಗಾರಿಕಾ ಇಲಾಖೆಗೆ 1940ರಲ್ಲಿ ಬಳುವಳಿಯಾಗಿ ನೀಡಿದ್ದರು. ಇಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಕ್ಯಾರೆಟ್, ಸೇಬಿನ ಗಿಡಗಳು ಮತ್ತು ಶೀತವಲಯದಲ್ಲಿ ಬೆಳೆಯುವ ಹಣ್ಣಿನ ಸಸಿ ಬೆಳೆಸಲಾಗಿತ್ತು. ಈಗ ಉದ್ಯಾನವಾಗಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.
ಗಾಜಿನ ಮನೆಯಲ್ಲಿ ಶೇ 60ರಷ್ಟು ಜಾಗದಲ್ಲಿ ಉದ್ಯಾನ ಇದೆ. ವಿವಿಧ ಗಿಡಗಳ ಜೊತೆ, ತೂಗು ಸೇತುವೆ, ಕಾರಂಜಿ, ಮಾಹಿತಿ ಕೇಂದ್ರ, ಕ್ಯಾಂಟೀನ್ ನಿರ್ಮಿಸುವ ಪ್ರಸ್ತಾವ ಇದೆ ಎಂದರು.