ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರೂಪಿಸಿರುವ ‘ಪರಿಷ್ಕೃತ ಮಹಾ ಯೋಜನೆ (ಆರ್ಎಂಪಿ)–2031’ ರೈತರ ಜಮೀನುಗಳನ್ನು ಕಬಳಿಸಿ, ಬಿಲ್ಡರ್ಸ್ಗಳಿಗೆ ಲಾಭ ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಪಾದಿಸಿದರು.
1006 ಚದರ ಕಿ.ಮೀ ವ್ಯಾಪ್ತಿಯನ್ನು ಮೂರು ವಲಯಗಳನ್ನಾಗಿ ಬಿಡಿಎ ವಿಂಗಡಣೆ ಮಾಡಿರುವುದು ದೊಡ್ಡ ಗೋಲ್ಮಾಲ್ಗೆ ಕಾರಣವಾಗಲಿದೆ. ಆರ್ಎಂಪಿ ಹಿಂದೆ ಹಣ ಗಳಿಕೆಯ ಉದ್ದೇಶವಿದೆ ವಿನಾ ಜನಪರ ಕಾಳಜಿಯಿಲ್ಲ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.
ವಲಯ ವಿಂಗಡಣೆ ಅವೈಜ್ಞಾನಿಕವಾಗಿರುವುದರಿಂದ ಕೃಷಿ ವಲಯ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ. ಖಾಸಗಿ ಜಮೀನಿನಲ್ಲಿ ಸಾರ್ವಜನಿಕ, ಅರೆ ಸಾರ್ವಜನಿಕ ಎಂದು ವರ್ಗೀಕರಣ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ.
ಬನ್ನೇರು ಘಟ್ಟ ರಸ್ತೆಯಲ್ಲಿ ಕೃಷಿ ಮತ್ತು ಅರಣ್ಯ ಜಮೀನು ಹೆಚ್ಚಾಗಿದೆ. ಅದರ ಮಧ್ಯಭಾಗದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಪ್ರಭಾವಿ ವ್ಯಕ್ತಿಗಳಿಗೆ ಅವಕಾಶ ನೀಡಿರುವುದು ಅನುಮಾನ ಮೂಡಿಸಿದೆ ಎಂದು ಹೇಳಿದರು.
ಆರ್ಎಂಪಿ ರೂಪಿಸುವ ಮೊದಲು ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕಾಗಿತ್ತು. ಅವೈಜ್ಞಾನಿಕ ಹಾಗೂ ಜನ ವಿರೋಧಿಯಾಗಿರುವ ಆರ್ಎಂಪಿಯನ್ನು ಸಮಗ್ರವಾಗಿ ಮರು ಪರಿಶೀಲಿಸಬೇಕು, ಅಹವಾಲು ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.