ವಾಷಿಂಗ್ಟನ್ : ಭಾರತ ಸಂಜಾತ ಅಮೆರಿಕದ ಯುವಕ ರಘುನಂದನ್ ಯಂಡಮೂರಿಯನ್ನು (32) ಗಲ್ಲಿಗೇರಿಸಲು ನಿಗದಿಯಾಗಿದ್ದ ದಿನವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಫೆಬ್ರುವರಿ 23ಕ್ಕೆ ಗಲ್ಲುಶಿಕ್ಷೆ ನಿಗದಿಯಾಗಿತ್ತು.
2015ರಲ್ಲಿ ಪೆನ್ಸಿಲ್ವೇನಿಯಾದ ಗವರ್ನರ್ ಟಾಮ್ ವೂಲ್ಫ್ ಮರಣ ದಂಡನೆಗೆ ತಾತ್ಕಾಲಿಕ ತಡೆ ಒಡ್ಡಿದ್ದರು. ಈ ಕಾರಣದಿಂದ ಗಲ್ಲು ಶಿಕ್ಷೆಯ ದಿನವನ್ನು ತಾತ್ಕಾಲಿಕವಾಗಿ ಮುಂದೂಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಭಾರತದ ಸತ್ಯವತಿ ವೆನ್ನಾ (61) ಮತ್ತು ಅವರ 10 ತಿಂಗಳ ಮೊಮ್ಮಗಳು ಸಾನ್ವಿಯನ್ನು ಹಣಕ್ಕಾಗಿ ಅಪಹರಿಸಿ, ರಘುನಂದನ್ ಹತ್ಯೆ ಮಾಡಿದ್ದ. ಜೂಜಾಡಲು ಮಾಡಿಕೊಂಡಿದ್ದ ಸಾಲ ತೀರಿಸಲು ಈತ ಇಂತಹ ದುಷ್ಕೃತ್ಯ ಎಸಗಿದ್ದ. ಇದಕ್ಕೆ ಸಂಬಂಧಿಸಿದಂತೆ ಆತನಿಗೆ 2014ರಲ್ಲಿ ಗಲ್ಲುಶಿಕ್ಷೆ ಘೋಷಿಸಲಾಗಿತ್ತು.
ಮರಣದಂಡನೆಗೆ ನೀಡಿರುವ ತಾತ್ಕಾಲಿಕ ತಡೆಯನ್ನು ಯಾವಾಗ ತೆರವುಗೊಳಿಸಲಾಗುವುದು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲದ ಕಾರಣ ಶಿಕ್ಷೆ ಜಾರಿ ಇನ್ನಷ್ಟು ತಡವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.