ಬೆಂಗಳೂರು: ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ಆರ್.ನಾರಾಯಣಪುರ ಕೆರೆ ಬಳಿ ಸ್ಥಳೀಯರು ‘ಕೆರೆ ಉಳಿವಿಗಾಗಿ ಸಂಕ್ರಾಂತಿ ಹಬ್ಬ’ ಹಮ್ಮಿಕೊಂಡಿದ್ದರು.
‘ಇಪ್ಪತ್ತು ವರ್ಷಗಳ ಹಿಂದೆ ನಾರಾಯಣಪುರ ಕೆರೆ ನೀರು ಶುದ್ಧವಾಗಿತ್ತು. ಸುತ್ತಮುತ್ತಲಿನ ಜನ ಈ ನೀರನ್ನೇ ಬಳಸುತ್ತಿದ್ದರು. ಕೆರೆ ದಂಡೆ ಮೇಲೆ ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದರು’ ಎಂದು ಕಾಂಗ್ರೆಸ್ ಮುಖಂಡ ನಲ್ಲೂರುಹಳ್ಳಿ ಟಿ.ನಾಗೇಶ್ ಹೇಳಿದರು.
‘ಈಗ ಕೆರೆ ಸಂಪೂರ್ಣ ಮಲಿನಗೊಂಡಿದೆ. ಇಲ್ಲಿನ ನಿವಾಸಿಗಳು ಮನಸ್ಸು ಮಾಡಿದರೆ, ಕೆರೆಯನ್ನು ಮತ್ತೆ ಮೊದಲಿನಂತೆ ಮಾಡಬಹುದು’ ಎಂದು ಸಲಹೆ ನೀಡಿದರು.
ಸ್ಥಳೀಯ ನಿವಾಸಿಗಳ ಸಂಘದ ಮುಖ್ಯಸ್ಥರಾದ ರಮಣಿ ರಾಧಾಕೃಷ್ಣ, ‘ಕೆರೆಯನ್ನು ಉಳಿಸುವ ಭಾಗವಾಗಿ ದಂಡೆ ಮೇಲೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದೇವೆ. ಇದರಿಂದಾಗಿ ಸ್ಥಳೀಯರಲ್ಲಿ ಕೆರೆ ಬಗ್ಗೆ ಅರಿವು ಮೂಡಿದರೆ, ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದರು.
ಯುನಿಕ್ ಸಂಸ್ಥೆಯ ಅಜೇಯ, ‘ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿ ಜತೆ ಕೈಜೋಡಿಸಿದ್ದೇವೆ. ಹಂತ ಹಂತವಾಗಿ ಕೆರೆ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಹಬ್ಬದ ಸಡಗರದಲ್ಲಿ ಭಾಗವಹಿಸಿದ ಸ್ಥಳೀಯರು ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಂಡು ಸಂಭ್ರಮಿಸಿದರು.