ರೋಣ: ಕಡಲೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಮತ್ತು ಶೀಘ್ರದಲ್ಲಿಯೇ ಕಡಲೆ ಖರೀದಿ ಕೇಂದ್ರವನ್ನು ಸ್ಥಾಪಿಸಿಬೇಕು, ಪಿಡಿಒ ನೇಮಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ಹಾಗೂ ಬೆಳವಣಕಿ ರೈತರು ನಾಲ್ಕೈದು ಗಂಟೆ ರಸ್ತೆ ತಡೆ ನಡೆಸಿದರು.
ಉತ್ತರ ಕರ್ನಾಟಕ ರೈತ ಸಂಘದ ಮುಖಂಡ ಲೋಕನಗೌಡ ಗೌಡರ ಮಾತನಾಡಿ ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಕಡಲೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಕಡಲೆ ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದರು.
ಕಡಲೆ ಬೆಳೆಗೆ ಪ್ರತಿ ಕ್ವಿಂಟಲ್ಗೆ ₹5400 ನಿಗದಿಪಡಿಸಿ ಶೀಘ್ರವೇ ಜಿಲ್ಲೆಯ್ಯಾದ್ಯಂತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದರು. ಬೆಳವಣಕಿ ಗ್ರಾಮಸ್ಥರು ಮಾತನಾಡಿ ಗ್ರಾಮಕ್ಕೆ ಹಲವು ತಿಂಗಳುಗಳಿಂದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಲ್ಲ. ಹೀಗಾಗಿ ಕೂಡಲೇ ಪಿಡಿಒ ನೇಮಿಸಬೇಕು ಎಂದು ಆಗ್ರಹಿಸಿದರು.
ಮೂರು ತಿಂಗಳ ಹಿಂದೆ ಎಸ್.ಸಿ ಕಾಲೊನಿಯಲ್ಲಿ ಮಳೆಯಾಗಿ ಹಲವು ಮನೆಗಳು ಬಿದ್ದು ಹೋಗಿವೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಮನೆಯ ಉತಾರಗಳನ್ನು ಒದಗಿಸಿ ಎಂದು ಹೇಳಿದ್ದರು.
ಆದರೆ ಉತಾರ ನೀಡಲು ಪಿಡಿಒ ಇಲ್ಲ. ಆದ್ದರಿಂದ ತಕ್ಷಣವೇ ಕಾಯಂ ಪಿಡಿಒ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಸುಭಾಸ ಮುದಿಗೌಡ್ರ, ವೀರಪ್ಪ ಕುಸುಗಲ್ಲ, ಎಂ.ವಿ.ದೇಸಾಯಿಗೌಡ್ರ, ಹನುಮಂತಪ್ಪ ಸೈದಾಪೂರ, ಪ್ರಭು ಪಾಟೀಲ, ಭೀಮರಡ್ಡಿ ಹಾಳಕೇರಿ, ಮುತ್ತು ನಂದಿ ಮತ್ತು ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.