ನವದೆಹಲಿ : ‘ಮುಸ್ಲಿಂ ಸಮುದಾಯದ ಬಹುಪತ್ನಿತ್ವ ಸಮಸ್ಯೆಗಿಂತ ಅಯೋಧ್ಯಾ ವಿವಾದ ದೊಡ್ಡದಲ್ಲವೇ’ ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಪ್ರಶ್ನಿಸಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ಭೂ ವಿವಾದವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಶುಕ್ರ
ವಾರ ಅರ್ಜಿ ಸಲ್ಲಿದ ಹಿರಿಯ ವಕೀಲ ರಾಜೀವ್ ಧವನ್ ಈ ಪ್ರಶ್ನೆ ಕೇಳಿದ್ದಾರೆ.
ಅಯೋಧ್ಯೆ ವಿವಾದದಲ್ಲಿ ಮುಸ್ಲಿಂ ಸಮುದಾಯದ ಪರ ವಕಾಲತ್ತು ವಹಿಸಿರುವ ಅವರು, ಬಹುಪತ್ನಿತ್ವ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಿರುವಾಗ ಅಯೋಧ್ಯೆ ವಿವಾದವನ್ನು ಏಕೆ ಸಂವಿಧಾನ ಪೀಠಕ್ಕೆ ಒಪ್ಪಿಸಬಾರದು ಎಂದು ಪ್ರಶ್ನಿಸಿದ್ದಾರೆ.
ವಿಚಾರಣೆ ಬಳಿಕ ತೀರ್ಮಾನ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ಅಯೋಧ್ಯೆ ವಿವಾದ ಕುರಿತು 2010ರಲ್ಲಿ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ವಿವಾದಿತ ಜಾಗವನ್ನು ಸುನ್ನಿ ವಕ್ಫ್ ಬೋರ್ಡ್, ರಾಮಲಲ್ಲಾ, ನಿರ್ಮೋಹಿ ಅಖಾಡಗಳಿಗೆ ಮೂರು ಸಮನಾದ ಭಾಗಗಳಾಗಿ ಹಂಚಿತ್ತು.