ಹಾಸನ: ನೀತಿಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರಿ ಭೂಮಿ ಮಂಜೂರಾತಿ ಕಡತಕ್ಕೆ ಸಹಿ ಹಾಕಿರುವ ಆರೋಪ ಎದುರಿಸುತ್ತಿರುವ ಸಚಿವ ಎ.ಮಂಜು ಅವರು ಚುನಾವಣಾ ಅಧಿಕಾರಿ ನೀಡಿದ್ದ ನೋಟಿಸ್ಗೆ ಉತ್ತರ ನೀಡಿದ್ದಾರೆ.
ಅರಕಲಗೂಡಿನ ಆರ್.ಓ.ವೆಂಕಟರಮಣ ರೆಡ್ಡಿ ಏ.7 ರಂದು ಸಚಿವರಿಗೆ ನೋಟಿಸ್ ನೀಡಿದ್ದರು. ಅದಕ್ಕೆ ಉತ್ತರಿಸುವ ಗಡುವು ಸಹ ಈಗ ಮುಗಿದಿದೆ.
ಉತ್ತರ ನೀಡದಿದ್ದರೆ ಏಕಪಕ್ಷೀಯವಾಗಿ ಎಫ್ಐಆರ್ ದಾಖಲಾಗುವ ಸಾಧ್ಯತೆ ಇರುವುದರಿಂದ ಸಚಿವರು ಗುರುವಾರ ಲಿಖಿತ ಉತ್ತರ ನೀಡಿದ್ದಾರೆ.
ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂದು ಆರ್.ಓ. ಜೊತೆ ಚರ್ಚೆ ನಡೆಸಲಿದ್ದಾರೆ. ಸಚಿವರ ಉತ್ತರ ಪರಿಶೀಲಿಸಿ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಅರಕಲಗೂಡು ವ್ಯಾಪ್ತಿಯ ಬಗರ್ ಹುಕುಂ ಸಾಗುವಳಿದಾರರ 1,093 ಕಡತಗಳನ್ನು ನೀತಿಸಂಹಿತೆ ಘೋಷಣೆ ಬಳಿಕ ಹಿಂದಿನ ದಿನಾಂಕ ನಮೂದಿಸಿ ಸಹಿ ಮಾಡಿದ್ದಾರೆ ಎಂಬ ಆರೋಪವನ್ನು ಎ.ಮಂಜು ಎದುರಿಸುತ್ತಿದ್ದಾರೆ.