ವಿಜಯಪುರ: ‘ನೋಡ್ರೀ, ಹೋಳಿ ಹುಣ್ಣಿಮ್ಯಾಗ ಹೊಯ್ಕೊಳ್ಳಾಕ ಯಾರಾದ್ರೂ ಪೊಲೀಸ್ರಿಂದ ಪರ್ಮೀಷನ್ ತಗೋತಾರಾ... ಇಲ್ವಲ್ಲಾ. ಹಂಗಾ ಸುಮ್ಸುಮ್ನೆ ನನ್ನ ವಿರುದ್ಧ ಹೇಳ್ಕೊಂಡು ಅಡ್ಡಾಡೋರಿಗೆ ಏನಂತಾ ಹೇಳೋಣ?
ಮಾಜಿ ಸಚಿವ, ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶನಿವಾರ ವಿಜಯಪುರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪರಿಯಿದು.
‘ನೀವು ಕಾಂಗ್ರೆಸ್ ಅಭ್ಯರ್ಥಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲಾ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ವಾಗ್ಬಾಣ ಬಿಟ್ಟರು.
‘ನೋಡ್ರೀ ನಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಆದ್ರೂ ನಂಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹಾಗಂತ ಯಾವ ಕಾರಣಕ್ಕೂ ಪಕ್ಷ ಬಿಡಲ್ಲ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರವೊಂದನ್ನು ಹೊರತುಪಡಿಸಿ, ಉಳಿದ ಎಲ್ಲೆಡೆ ಪ್ರಚಾರ ನಡೆಸುವೆ.
‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ನಮ್ಮ ಬೆಂಬಲ, ಸಹಕಾರ ಬೇಕಿಲ್ವಂತೆ. ಇಲ್ಲಿ ನಾವು ಕೆಲಸ ಮಾಡಿದ್ರೂ ನಮ್ಮ ಹೆಸರಲ್ಲಿ ಅವ್ರು ಹೊಯ್ಕೊಳ್ಳೋದ್ ನಿಲ್ಸಲ್ಲ. ಅದಕ್ಕೆ ಇತ್ತ ತಲೆನೇ ಹಾಕಲ್ಲ...’ ಎಂದು ಅಪ್ಪಾಸಾಹೇಬರು ಹೇಳುತ್ತಿದ್ದಂತೆ ಗೋಷ್ಠಿ ನಗೆಗಡಲಲ್ಲಿ ತೇಲಿತು.