ಮುಂಬೈ (ಪಿಟಿಐ): ‘ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘನತೆ ಮೆರೆದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಬಿಜೆಪಿಗೆ ಸವಾಲೊಡ್ಡಬಲ್ಲರು’ ಎಂದು ಶಿವಸೇನೆ ಶ್ಲಾಘಿಸಿದೆ.
ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಶಿವಸೇನೆ, ‘2019ರಲ್ಲಿ ಪಕ್ಷ ಬಹುಮತ ಗಳಿಸಿದರೆ ನಾನೇ ಪ್ರಧಾನಿ ಎಂಬುದಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹೊರಹಾಕಿರುವ ರಾಹುಲ್ಗಾಂಧಿ ಹೇಳಿಕೆಯನ್ನು ಟೀಕಿಸುವ ಬದಲು ಬಿಜೆಪಿ ಸ್ವಾಗತಿಸಬೇಕಿತ್ತು’ ಎಂದು ಪ್ರತಿಪಾದಿಸಿದೆ.
‘ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದಿದ್ದೇ ಆದಲ್ಲಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸುವುದಾಗಿ ಹೇಳಬೇಕಾಗಿತ್ತು. ಮಿಗಿಲಾಗಿ, ರಾಹುಲ್ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೇ ಎಂಬುದನ್ನು ಜನರೇ ತೀರ್ಮಾನಿಸುವರು’ ಎಂದೂ ಪಕ್ಷ ಹೇಳಿದೆ.
‘2014ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದ ರಾಹುಲ್ ಗಾಂಧಿ ಈಗ ಸಾಕಷ್ಟು ಬದಲಾಗಿದ್ದಾರೆ. ಈಗ ಅವರೊಬ್ಬ ದೃಢ ಮನಸ್ಸಿನ ನಾಯಕನಾಗಿ ಹೊರಹೊಮ್ಮಿದ್ದು, ಈ ಅಂಶ ಕಳದ ವರ್ಷದ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ’ ಎಂದೂ ಸಂಪಾದಕೀಯ ಶ್ಲಾಘಿಸಿದೆ.