ಮುಂಬೈ: ಸ್ವಯಂಚಾಲಿತ ಎಚ್ಚರಿಕೆ ಸಂದೇಶ ರವಾನೆಯಾದ ಪರಿಣಾಮ ಇಂಡಿಗೊ ಮತ್ತು ಏರ್ಡೆಕ್ಕನ್ ಸಂಸ್ಥೆಗಳಿಗೆ ಸೇರಿದ ವಿಮಾನಗಳು ಢಾಕಾ ವಾಯುಪ್ರದೇಶದಲ್ಲಿ ಡಿಕ್ಕಿ ಹೊಡೆಯುವುದು ತಪ್ಪಿದೆ.
ಮೇ 2ರಂದು ಈ ಘಟನೆ ಸಂಭವಿಸಿದ್ದು, ಇಂಡಿಗೊ ವಿಮಾನ ಕೋಲ್ಕತ್ತದಿಂದ ಅಗರ್ತಲಕ್ಕೆ ತೆರಳುತ್ತಿತ್ತು. ಅಗರ್ತಲದಿಂದ ಕೋಲ್ಕತ್ತಕ್ಕೆ ಏರ್ಡೆಕ್ಕನ್ ಸಂಸ್ಥೆಯ ವಿಮಾನ ಹೊರಟಿತ್ತು.
ಹಾರಾಡುವ ಸಂದರ್ಭದಲ್ಲಿ ಎರಡು ವಿಮಾನಗಳ ನಡುವೆ ಇರಬೇಕಾದ ಅಂತರವನ್ನು ಎರಡೂ ವಿಮಾನಗಳು ಕಾಯ್ದುಕೊಂಡಿರಲಿಲ್ಲ. ಆದರೆ, ತಕ್ಷಣವೇ ಲಭಿಸಿದ ಎಚ್ಚರಿಕೆ ಸಂದೇಶದ ಪರಿಣಾಮ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಈ ಸಂಬಂಧ ವಿಮಾನ ಅಪಘಾತ ತನಿಖಾ ಬ್ಯುರೊ (ಎಎಐಬಿ) ತನಿಖೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.