ನವದೆಹಲಿ: ಕೇಂದ್ರ ಸರ್ಕಾರದ ಬಡ್ಡಿ ಸಹಾಯಧನ ಯೋಜನೆ ಅಡಿಯಲ್ಲಿ ಎಷ್ಟು ರೈತರು ಬೆಳೆ ಸಾಲ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ.
ರೈತರಿಗೆ ಒಂದು ವರ್ಷದ ಅವಧಿಗೆ ₹3 ಲಕ್ಷದವರೆಗೆ ಶೇ 4ರ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುವ ಯೋಜನೆಗೆ ಕೇಂದ್ರ ಸಂಪುಟ ಕಳೆದ ಜೂನ್ನಲ್ಲಿ ಅನುಮೋದನೆ ನೀಡಿತ್ತು.
ಆರ್ಬಿಐ ಮತ್ತು ನಬಾರ್ಡ್ ಈ ಯೋಜನೆಯ ಅನುಷ್ಠಾನ ಸಂಸ್ಥೆಗಳು. ಬಡ್ಡಿ ಸಹಾಯಧನದ ಮೊತ್ತವನ್ನು ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನೀಡಲಾಗುತ್ತದೆ.
ಈ ಯೋಜನೆ ಅಡಿಯಲ್ಲಿ ಬ್ಯಾಂಕುಗಳ ಮೂಲಕ ರೈತರಿಗೆ ಯಾವ ರೀತಿ ಸಾಲ ನೀಡಲಾಗಿದೆ ಎಂದು ಆರ್ಬಿಐ ಪ್ರತಿನಿಧಿಯನ್ನು ಸಂಸತ್ತಿನ ಸ್ಥಾಯಿ ಸಮಿತಿಯು ಇತ್ತೀಚೆಗೆ ಕೇಳಿತ್ತು. ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಆರ್ಬಿಐನಲ್ಲಿ ಇಲ್ಲ ಎಂದು ಪ್ರತಿನಿಧಿ ಉತ್ತರಿಸಿದ್ದರು.
ಸಣ್ಣ ಮತ್ತು ಮಧ್ಯಮ ರೈತರನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿತ್ತು. ಕೃಷಿ ಉತ್ಪನ್ನಗಳ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಸಾಲದಿಂದ ರೈತರನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು.