ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಯಿಂದ ಮೋದಿವರೆಗೆ ನಾಲ್ವರು ಗುಜರಾತಿಗಳಿಂದ ದೇಶಕ್ಕೆ ಮಹತ್ವದ ಕೊಡುಗೆ: ಅಮಿತ್ ಶಾ

Published 19 ಮೇ 2023, 10:44 IST
Last Updated 19 ಮೇ 2023, 10:44 IST
ಅಕ್ಷರ ಗಾತ್ರ

ನವದೆಹಲಿ: ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ನರೇಂದ್ರ ಮೋದಿ, ಈ ನಾಲ್ವರು ಗುಜರಾತಿಗಳು ಭಾರತದ ಆಧುನಿಕ ಇತಿಹಾಸದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಶ್ರೀ ದೆಹಲಿ ಗುಜರಾತಿ ಸಮಾಜದ 125 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತದ ಕೀರ್ತಿ ವಿಶ್ವದಾದ್ಯಂತ ಹರಡುತ್ತಿದೆ ಎಂದು ತಿಳಿಸಿದ್ದಾರೆ.

ಗಾಂಧೀಜಿಯವರ ಪ್ರಯತ್ನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸರ್ದಾರ್ ಪಟೇಲ್‌ನಿಂದ ದೇಶ ಒಗ್ಗೂಡಿದೆ, ಮೊರಾರ್ಜಿ ದೇಸಾಯಿ ಅವರಿಂದ ದೇಶದ ಪ್ರಜಾಪ್ರಭುತ್ವ ಪುನರುಜ್ಜೀವನಗೊಂಡಿದೆ. ನರೇಂದ್ರ ಮೋದಿಯಿಂದಾಗಿ ಭಾರತ ವಿಶ್ವದಾದ್ಯಂತ ಕೀರ್ತಿ ಗಳಿಸಿದೆ ಎಂದು ಅಮಿತ್ ಶಾ ಕೊಂಡಾಡಿದ್ದಾರೆ.

ಈ ನಾಲ್ವರು ಗುಜರಾತಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅವರು ಇಡೀ ದೇಶದ ಹೆಮ್ಮೆ ಎಂದು ಗುಜರಾತಿ ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ ಶಾ ಹೇಳಿದ್ದಾರೆ.

ಗುಜರಾತಿ ಸಮುದಾಯವು ದೇಶ ಮತ್ತು ವಿಶ್ವದಾದ್ಯಂತ ಪ್ರಸ್ತುತವಾಗಿದೆ. ಯಾವುದೇ ಸಮಾಜದಲ್ಲಿ ಎಂದಿಗೂ ಚೆನ್ನಾಗಿ ಬೆರೆತಿದೆ ಮತ್ತು ಸೇವೆ ಸಲ್ಲಿಸುತ್ತಿದೆ ಎಂದು ಶಾ ಹೇಳಿದರು. ಅದೇ ವೇಳೆ ದೆಹಲಿಯಲ್ಲಿ ನೆಲೆಸಿರುವ ಗುಜರಾತಿಗರನ್ನು ಅವರ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಸಂಪರ್ಕಿಸುವುದರೊಂದಿಗೆ ದೇಶ ಮತ್ತು ಸಮಾಜದ ಸೇವೆಯತ್ತ ಅವರನ್ನು ಪ್ರೇರೇಪಿಸುವ ಕೆಲಸವನ್ನು ಈ ಸಂಸ್ಥೆ ಮಾಡಿದೆ ಎಂದಿದ್ದಾರೆ.

ಪ್ರತಿ ಸಮುದಾಯದ ಜನರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಗುಜರಾತಿ ಸಮುದಾಯವೂ ನಗರದಲ್ಲಿ ಉತ್ತಮ ಕ್ರಮದಲ್ಲಿ ವಾಸಿಸುತ್ತಿದ್ದಾರೆ ಎಂದು ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರ ಒಂಬತ್ತು ವರ್ಷಗಳ ಅಧಿಕಾರಾವಧಿಯನ್ನು ಉಲ್ಲೇಖಿಸಿದ ಅಮಿತ್ ಶಾ, ಈ ಅವಧಿಯಲ್ಲಿ ದೇಶವು ಅನೇಕ ಸಾಧನೆಗಳನ್ನು ಮಾಡಿದೆ. 2014ರಲ್ಲಿ ಮೋದಿ ಪ್ರಧಾನಿಯಾದಾಗ ಭಾರತದ ಆರ್ಥಿಕತೆ ವಿಶ್ವದಲ್ಲಿ 11ನೇ ಸ್ಥಾನದಲ್ಲಿತ್ತು, ಇಂದು ಒಂಬತ್ತು ವರ್ಷಗಳ ನಂತರ ಭಾರತದ ಆರ್ಥಿಕತೆ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದರು. ಈಗ ಐಎಂಎಫ್ ಸೇರಿದಂತೆ ಹಲವು ಏಜೆನ್ಸಿಗಳು ಭಾರತದ ಆರ್ಥಿಕತೆಯನ್ನು ಉತ್ತಮವಾದುದು ಎಂಬಂತೆ ನೋಡುತ್ತಿವೆ ಎಂದು ತಿಳಿಸಿದ್ದಾರೆ.

ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ ವೈಮಾನಿಕ ದಾಳಿಗಳನ್ನು ನಡೆಸುವ ಮೂಲಕ ಭಾರತವು ಜಗತ್ತಿಗೆ ಭಾರತದ ಗಡಿಯನ್ನು ಯಾರೂ ಹಾಳುಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದೆ. 130 ಕೋಟಿ ಜನರಿರುವ ಭಾರತದಂತಹ ವಿಶಾಲ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಸುಗಮ ರೀತಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಶಾ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿದೆ. ಭಾರತವು ಸ್ಟಾರ್ಟ್‌ಅಪ್‌ಗಳ ಕ್ಷೇತ್ರದಲ್ಲಿ ಮೂರನೇ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಿಂದ ಯಾವುದೇ ಹಿಂಸಾಚಾರದ ವರದಿಗಳಿಲ್ಲದೆ 370‌ನೇ ವಿಧಿಯನ್ನು ರದ್ದುಗೊಳಿಸುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ, ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಮಾಡಿದರು, ಇದರ ಪರಿಣಾಮವಾಗಿ ಒಂಬತ್ತು ವರ್ಷಗಳಲ್ಲಿ ಯಾವುದೇ ಒಂದು ದೊಡ್ಡ ಭಯೋತ್ಪಾದಕ ಘಟನೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದ ಆಂತರಿಕ ಭದ್ರತೆ ಮತ್ತು ಗಡಿಗಳ ಭದ್ರತೆಯನ್ನು ಬಲಪಡಿಸಲು ಮೋದಿ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಮೋದಿ ಎಲ್ಲರಿಗೂ ಸೇರಿದವರು ಮತ್ತು ಎಲ್ಲರೂ ಅವರಿಗೆ ಸೇರಿದವರು. ಇದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದು ಅಮಿತ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT