ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೇಜ್ರಿವಾಲ್ ಕಿ ಗ್ಯಾರಂಟಿ’ ಘೋಷಿಸಿದ ದೆಹಲಿ ಸಿಎಂ ಕೇಜ್ರಿವಾಲ್

Published 12 ಮೇ 2024, 9:37 IST
Last Updated 12 ಮೇ 2024, 9:37 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗೆ ‘ಕೇಜ್ರಿವಾಲ್ ಕಿ ಗ್ಯಾರಂಟಿ’ ಅನ್ನು ಘೋಷಣೆ ಮಾಡಿದ್ದಾರೆ.

ಕೇಂದ್ರದಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ ಬಣ ಅಧಿಕಾರಕ್ಕೆ ಬಂದರೆ, ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಮಿ ಮರಳಿ ಪಡೆಯುವುದು ಸೇರಿದಂತೆ 10 ಕೆಲಸಗಳನ್ನು ಯುದ್ಧೋಪಾದಿಯಲ್ಲಿ ನಿರ್ವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಜಾಮೀನು ಪಡೆದು ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿರುವ ಕೇಜ್ರಿವಾಲ್, ಇಂಡಿಯಾ ಬಣ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ಎಎಪಿ ಸರ್ಕಾರದ ಭಾಗವಾಗಲಿದೆ ಎಂದು ಹೇಳಿದ್ದಾರೆ.

‘ಮೋದಿ ಗ್ಯಾರಂಟಿ’ ಮತ್ತು ‘ಕೇಜ್ರಿವಾಲ್ ಗ್ಯಾರಂಟಿ’ಗಳಲ್ಲಿ ಒಂದನ್ನು ಜನರು ಆಯ್ಕೆ ಮಾಡಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ನನ್ನ ಗ್ಯಾರಂಟಿಗಳ ಬಗ್ಗೆ ಇಂಡಿಯಾ ಬಣದ ಪಕ್ಷಗಳ ಜೊತೆ ಚರ್ಚೆ ನಡೆಸಿಲ್ಲ. ಆದರೆ, ನನ್ನ ಇಂಡಿಯಾ ಬಣದ ಪಕ್ಷಗಳು ಇದನ್ನು ಈಡೇರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಚಿತ ವಿದ್ಯುತ್, ಒಳ್ಳೆಯ ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ ಗ್ಯಾರಂಟಿಗಳನ್ನು ಎಎಪಿ ಈಡೇರಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಗ್ಯಾರಂಟಿ ಪೂರೈಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

24 ಗಂಟೆ ವಿದ್ಯುತ್ ಸರಬರಾಜು, ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ, ಯುವಕರಿಗಾಗಿ 2 ಕೋಟಿ ಉದ್ಯೋಗ ಸೃಷ್ಟಿ ಗ್ಯಾರಂಟಿ ಭಾಗವಾಗಿರಲಿವೆ ಎಂದು ಹೇಳಿದ್ದಾರೆ.

‘ಪಂಜಾಬ್ ಮತ್ತು ದೆಹಲಿಯಲ್ಲಿ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ದೇಶದಾದ್ಯಂತ ನಾವು ಇದನ್ನು ಮಾಡಬಲ್ಲೆವು. ದೇಶದಾದ್ಯಂತ ಸರ್ಕಾರಿ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ. ನಾವು ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಮಾಡಬಲ್ಲೆವು. ಅದು ಹೇಗೆ ಎನ್ನುವುದು ನಮಗೆ ತಿಳಿದಿದೆ’ ಎಂದು ಹೇಳಿದ್ದಾರೆ.

ಅಗ್ನಿವೀರ್ ಯೋಜನೆಯನ್ನು ಮುಕ್ತಾಯ ಮಾಡುವ ಮತ್ತು ರೈತರ ಬೆಳೆಗಳಿಗೆ ಸ್ವಾಮಿನಾಥನ್ ಸಮಿತಿ ವರದಿ ಆಧರಿಸಿ ಕನಿಷ್ಠ ಬೆಂಬಲ ಬೆಲೆ ಒದಗಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಅಲ್ಲದೆ, ಚೀನಾ ಆಕ್ರಮಿತ ಭಾರತದ ನೆಲವನ್ನೂ ಬಿಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

‘ಎಲ್ಲ ಭ್ರಷ್ಟರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಬಿಜೆಪಿಯ ವಾಷಿಂಗ್ ಮೆಶಿನ್ ಅನ್ನು ಸಾರ್ವಜನಿಕವಾಗಿ ಕೆಡವಲಾಗುವುದು. ದೇಶದಲ್ಲಿ ಅಡೆ ತಡೆ ಇಲ್ಲದ ವ್ಯಾಪಾರ ಮತ್ತು ವಹಿವಾಟು ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ನಾನು 20 ದಿನಗಳ ನಂತರ ಜೈಲಿಗೆ ಹಿಂದಿರುಗಬೇಕು. ನೀವು ಪೊರಕೆಯನ್ನು (ಎಎಪಿ ಚಿಹ್ನೆ) ಆಯ್ಕೆ ಮಾಡಿದರೆ ನಾನು ಜೈಲಿಗೆ ವಾಪಸ್ ಆಗಬೇಕಿಲ್ಲ..
–ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ

‘ಎಎಪಿ ಸರ್ಕಾರ ಕೆಡವಲು ಯೋಜಿಸಿದ್ದ ಬಿಜೆಪಿ’

‘ನನ್ನ ಬಂಧನದ ನಂತರ ಬಿಜೆಪಿಯು ದೆಹಲಿ ಮತ್ತು ಪಂಜಾಬ್‌ನ ಎಎಪಿ ಸರ್ಕಾರಗಳನ್ನು ಕೆಡವಲು ಯೋಜಿಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಕೇಜ್ರಿವಾಲ್ ಆರೋಪಿಸಿದರು. ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು ‘ನನ್ನ ಬಂಧನದ ನಂತರ ಎಎಪಿಯಲ್ಲಿ ಒಗ್ಗಟ್ಟು ಹೆಚ್ಚಾಗಿದೆ’ ಎಂದು ತಿಳಿಸಿದರು. ‘ನನ್ನನ್ನು ಬಂಧಿಸುವುದು ಪಕ್ಷವನ್ನು ಒಡೆಯುವುದು ದೆಹಲಿ ಪಂಜಾಬ್ ಸರ್ಕಾರಗಳನ್ನು ಬೀಳಿಸುವುದು ಅವರ ಯೋಜನೆಯಾಗಿತ್ತು. ಆದರೆ ನನ್ನ ಬಂಧನದ ನಂತರ ಅವರ ಯೋಜನೆ ವಿಫಲಗೊಂಡಿತು. ನಿಮ್ಮನ್ನು ಒಡೆಯಲು ಅವರಿಗೆ ಸಾಧ್ಯವಾಗಲಿಲ್ಲ’ ಎಂದು ಶಾಸಕರಿಗೆ ಹೇಳಿದರು.

10 ಗ್ಯಾರಂಟಿಗಳು

* ಚೀನಾ ಅತಿಕ್ರಮಣದಿಂದ ಭಾರತದ ನೆಲವನ್ನು ಮುಕ್ತಗೊಳಿಸುವುದು

*24X7 ವಿದ್ಯುತ್ ಪೂರೈಕೆ

* ಉತ್ತಮ ಶಿಕ್ಷಣ ಉತ್ತಮ

* ಆರೋಗ್ಯ ಸೌಲಭ್ಯ

* ಪ್ರತಿ ವರ್ಷ ಎರಡು ಕೋಟಿ ಉದ್ಯೋಗ

* ಅಗ್ನಿಪಥ ಯೋಜನೆ ರದ್ದು

* ಸ್ವಾಮಿನಾಥನ್ ವರದಿಯಂತೆ ಬೆಳೆಗಳಿಗೆ ಎಂಎಸ್‌ಪಿ

* ದೆಹಲಿಗೆ ರಾಜ್ಯದ ಸ್ಥಾನಮಾನ

* ಬಿಜೆಪಿಯ ‘ವಾಷಿಂಗ್ ಮಷಿನ್’ ಕಳಚುವುದು ‌

* ಉದ್ದಿಮೆ ವ್ಯಾಪಾರ ಸುಸೂತ್ರವಾಗಿ ನಡೆಯಲು ವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT