ನವದೆಹಲಿ: ಬೆಲೆ ಏರಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ರಾಜ್ಯಸಭೆಗೆ ಟೊಮೆಟೊ ಹಾಗೂ ಶುಂಠಿಯ ಹಾರವನ್ನು ಧರಿಸಿ ಬಂದರು.
ಆದರೆ ಅವರ ಈ ವರ್ತನೆಗೆ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ತೀವ್ರ ಆಕ್ಷೇಪ ವ್ಯಕ್ತಡಿಸಿದರಲ್ಲದೆ, ಇದರಿಂದ ಭಾರಿ ನೋವುಂಟಾಗಿದೆ ಎಂದು ನುಡಿದರು.
ರಾಜ್ಯಸಭೆಯಲ್ಲಿ ಕೆಲವು ಅಧಿಕೃತ ದಾಖಲೆಗಳನ್ನು ಮಂಡಿಸುವಾಗ ಗುಪ್ತಾ ಅವರು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸದನಕ್ಕೆ ಪ್ರವೇಶಿಸಿದರು.
ग़रीब लोगों का ख़ून चूस रही 'Modi की महंगाई डायन'‼️
— AAP (@AamAadmiParty) August 9, 2023
Modi सरकार का ध्यान महंगाई की तरफ आकर्षित करने के लिए टमाटर और अदरक की माला पहन कर संसद पहुँचे AAP MP @DrSushilKrGupta pic.twitter.com/FkLEQxQAe7
ಕಲಾಪ ನಡೆಸುವ ವೇಳೆ ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ ಜಗದೀಪ್ ಧನಕರ್ ಅವರು, ಎರಡು ನಿಮಿಷ ಮೌನಾಚರಣೆ ಮಾಡುವಂತೆ ಸದಸ್ಯರಿಗೆ ಸೂಚಿಸಿದರು. ಇದಾಗ ಬಳಿಕ ಅಧಿಕೃತ ದಾಖಲೆಗಳನ್ನು ಮಂಡಿಸಲಾಯಿತು.
ಈ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬೈನಲ್ಲಿ ಕ್ವಿಟ್ ಇಂಡಿಯಾ ಸಮಾರಂಭದಲ್ಲಿ ಭಾಗಿಯಾಗಲು ಹೊರಟಿದ್ದ ಮಹಾತ್ಮಾ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ಅವರ ಬಂಧನದ ಬಗ್ಗೆ ಉಲ್ಲೇಖಿಸಿದರು.
’ನೀವು ಕ್ವಿಟ್ ಇಂಡಿಯಾ ಚಳವಳಿಯನ್ನು ಉಲ್ಲೇಖಿಸಿದ್ದೀರಿ. ನಾವು ಎರಡು ನಿಮಿಷ ಮೌನಾಚರಣೆ ಮಾಡಿದೆವು. ಆದರೆ ತುಷಾರ್ ಗಾಂಧಿಯನ್ನು ಇಂದು ಬಂಧಿಸಲಾಗಿದೆ’ ಎಂದು ಖರ್ಗೆ ಹೇಳಿದರು. ಮುಂದೆ ಮಾತನಾಡಲು ಖರ್ಗೆ ಅವರಿಗೆ ಸಭಾಪತಿಗಳು ಅವಕಾಶ ನಿರಾಕರಿಸಿದರು. ಖರ್ಗೆಯವರು ಮಾತು ಮುಂದುವರಿಸಲು ಮುಂದಾದಾಗ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.
ಗದ್ದಲ ನಡುವೆಯೇ ಗುಪ್ತಾ ಅವರನ್ನು ಗಮನಿಸಿದ ಧನಕರ್ ಅವರು, ಟೊಮೆಟೊ ಹಾರ ಧರಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ನಡವಳಿಕೆ ಬಗ್ಗೆ ನಾವೇ ಗೆರೆ ಹಾಕಿಕೊಳ್ಳಬೇಕು. ಸಭೆಯ ಅಧ್ಯಕ್ಷನಾಗಿ ಸುಶೀಲ್ ಗುಪ್ತಾ ಅವರು ಸಭೆಗೆ ಬಂದ ರೀತಿ ನನಗೆ ಭಾರೀ ಬೇಸರ ಉಂಟಾಗಿದೆ. ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾನು ಆಡಳಿತ ಹಾಗೂ ವಿರೋಧ ಪಕ್ಷದ ನಾಯನ ಜತೆ ಚರ್ಚೆ ಮಾಡುತ್ತೇನೆ’ ಎಂದು ಕೋಪಗೊಂಡವರಂತೆ ಕಂಡಿದ್ದ ಜಗದೀಪ್ ಧನಕರ್ ನುಡಿದರು. ಬಳಿಕ ಮಧ್ಯಾಹ್ನ 2ಕ್ಕೆ ಕಲಾಪವನ್ನು ಮುಂದೂಡಿದರು.
ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಆಮ್ ಆದ್ಮಿ ಪಾರ್ಟಿ, ’ಮೋದಿಯ ಹಣದುಬ್ಬರ ಜನರ ರಕ್ತ ಹೀರುತ್ತಿದೆ. ಮೋದಿ ಸರ್ಕಾರದ ಗಮನ ಸೆಳೆಯಲು ಟೊಮೆಟೊ ಹಾಗೂ ಶುಂಠಿಯ ಹಾರ ಧರಿಸಿ ಸಂಸದರು ಸದನಕ್ಕೆ ಆಗಮಿಸಿದರು’ ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.