ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಕೃಷ್ಟ ಎಂದು ಕಳಪೆ ಕಲ್ಲಿದ್ದಲು ಪೂರೈಕೆ: ಅದಾನಿ ಸಮೂಹದ ವಿರುದ್ಧ ಆರೋಪ

Published 23 ಮೇ 2024, 16:30 IST
Last Updated 23 ಮೇ 2024, 16:30 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಸರ್ಕಾರದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಸಂಸ್ಥೆಗೆ ಅದಾನಿ ಸಮೂಹವು ಕಳಪೆ ದರ್ಜೆಯ ಕಲ್ಲಿದ್ದಲು ಪೂರೈಕೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಅದಾನಿ ಸಮೂಹವು ಮತ್ತೊಮ್ಮೆ ವಿವಾದಕ್ಕೀಡಾಗಿದೆ.‌

ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯು (ಒಸಿಸಿಆರ್‌ಪಿ) ಈ ಆರೋಪ ಮಾಡಿದೆ. ಫೈನಾನ್ಷಿಯಲ್‌ ಟೈಮ್ಸ್‌ ಈ ಕುರಿತು ಬುಧವಾರ ವರದಿ ಮಾಡಿದೆ.

ವರದಿಯ ಪ್ರಕಾರ, ಒಸಿಸಿಆರ್‌ಪಿಗೆ ಲಭ್ಯವಾದ ದಾಖಲೆಗಳಂತೆ, 2014ರ ಜನವರಿಯಲ್ಲಿ ಅದಾನಿ ಸಮೂಹ ಇಂಡೊನೇಷ್ಯಾದಿಂದ ಹಡಗಿನಲ್ಲಿ ಕಲ್ಲಿದ್ದಲು ತರಿಸಿತ್ತು. ಇದರ ಗುಣಮಟ್ಟ ಪ್ರತಿ ಕೆ.ಜಿಗೆ 3,500 ಕ್ಯಾಲೊರಿ. ಇದನ್ನು ತಮಿಳುನಾಡು ವಿದ್ಯುತ್ ಉತ್ಪಾದನಾ ಮತ್ತು ಸರಬರಾಜು ಕಂಪನಿಗೆ ಮಾರಲಾಗಿತ್ತು. ಆಗ ಇದರ ಗುಣಮಟ್ಟ ಪ್ರತಿ ಕೆ.ಜಿಗೆ 6000 ಕ್ಯಾಲೊರಿ ಎಂದು ತಿಳಿಸಲಾಗಿತ್ತು. ಕ್ಯಾಲೋರಿ ಕಲ್ಲಿದ್ದಲಿನ ಗುಣಮಟ್ಟದ ಉತ್ಕೃಷ್ಟತೆಯ ಪ್ರತೀಕವಾಗಿದೆ. 

ವರದಿಯ ಪ್ರಕಾರ, ಅದಾನಿ ಸಮೂಹವು ಇಂಡೊನೇಷ್ಯಾದ ಕಂಪನಿಯಿಂದ ಕಳಪೆ ಗುಣಮಟ್ಟದ ಕಲ್ಲಿದ್ದಲ್ಲನ್ನು ಟನ್‌ಗೆ 28 ಡಾಲರ್ ದರದಲ್ಲಿ ತರಿಸಿತ್ತು. ಅದನ್ನೇ ತಮಿಳುನಾಡು ಸರ್ಕಾರದ ಸಂಸ್ಥೆಗೆ ಉತ್ಕೃಷ್ಟ ಗುಣಮಟ್ಟದ್ದು ಎಂದು ಪ್ರತಿ ಟನ್‌ಗೆ 91.91 ಡಾಲರ್ ದರದಲ್ಲಿ ಮಾರಲಾಗಿದೆ.

ಈ ವಹಿವಾಟಿನ ಮೂಲಕ ಅದಾನಿ ಸಮೂಹವು ದೊಡ್ಡ ಮೊತ್ತದ ಲಾಭ ಪಡೆದುಕೊಂಡಿತು. ಇನ್ನೊಂದೆಡೆ, ಕಳಪೆ ದರ್ಜೆಯ ಕಲ್ಲಿದ್ದಲು ಬಳಕೆಯಿಂದಾಗಿ ಪರಿಸರದ ಮೇಲೂ ಪ್ರತಿಕೂಲ ಪರಿಣಾಮ ಬೀರಲು ಕಾರಣವಾಯಿತು ಎಂದು ವರದಿಯು ಉಲ್ಲೇಖಿಸಿದೆ.

ಆದರೆ, ಈ ಆರೋಪವನ್ನು ಅದಾನಿ ಸಮೂಹವು ನಿರಾಕರಿಸಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಸೇರಿದಂತೆ ಈ ವರದಿಯನ್ನು ಉಲ್ಲೇಖಿಸಿರುವ ವಿರೋಧ ಪಕ್ಷಗಳ ನಾಯಕರು,  ಇಡೀ ವಹಿವಾಟಿನ ಕುರಿತಂತೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಎಂದು ಆಗ್ರಹಪಡಿಸಿದ್ದಾರೆ.

ರಾಹುಲ್‌ಗಾಂಧಿ ಅವರು, ‘ಇದು, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಯಲಾದ ಬಹುದೊಡ್ಡ ಕಲ್ಲಿದ್ದಲು ಹಗರಣ. ಈ ಮೂಲಕ ಪ್ರಧಾನಿ ಮೋದಿಯವರ ಆತ್ಮೀಯ ಗೆಳೆಯ ಅದಾನಿ ಅವರು, ಅಗ್ಗದ ದರ್ಜೆ ಕಲ್ಲಿದ್ದಲನ್ನು ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೀಗೆ ಲೂಟಿ ಮಾಡಲಾದ ಹಣವು ಸಾಮಾನ್ಯ ಜನರು ವಿದ್ಯುತ್ ಖರೀದಿದಾಗಿ ತಮ್ಮ ಜೇಬಿನಿಂದ ಭರಿಸಿದ್ದ ಹಣವಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅದಾನಿ ಸಮೂಹದ ವಕ್ತಾರರು, ‘ಕಲ್ಲಿದ್ದಲಿನ ಗುಣಮಟ್ಟವನ್ನು ಹಡಗಿಗೆ ತುಂಬಿಸುವ ಮತ್ತು ಇಳಿಸುವ ಹಂತದಲ್ಲಿ ಮಾಡಲಾಗುತ್ತದೆ. ಕಸ್ಟಮ್ಸ್‌ ಅಧಿಕಾರಿಗಳು ಹಾಗೂ ತಮಿಳುನಾಡು ಸರ್ಕಾರದ ಕಂಪನಿಯ ಅಧಿಕಾರಿಗಳು ಗುಣಮಟ್ಟ ಪರೀಕ್ಷೆ ನಡೆಸುವರು. ಹೆಚ್ಚಿನದಾಗಿ ಹಣದ ಪಾವತಿಯು ಪೂರೈಕೆ ಮಾಡಲಾದ ವೇಳೆ ಆದ ಕಲ್ಲಿದ್ದಲಿನ ಗುಣಮಟ್ಟವನ್ನು ಆಧರಿಸಿರುತ್ತದೆ‘ ಎಂದು ಹೇಳಿದ್ದಾರೆ. 

ಬಳಕೆದಾರ ಸಂಸ್ಥೆಗೆ ಕಲ್ಲಿದ್ದಲನ್ನು ಪೂರೈಸಿದಾಗ ಮೂರು ಪಟ್ಟು ಹಣ ಪಡೆದಿದೆಯೇ ಎಂಬ ಆರೋಪದ ಕುರಿತು ಕಂದಾಯ ಕಣ್ಗಾವಲು ನಿರ್ದೇಶನಾಲಯವು (ಡಿಆರ್‌ಐ) ದಶಕದ ಹಿಂದೆಯೇ ತನಿಖೆಗೆ ಆದೇಶಿಸಿತ್ತು.

ಆದರೆ, ಕಲ್ಲಿದ್ದಲು ಸಾಗಣೆ ಕುರಿತು ವಿವರ ಪಡೆಯದಂತೆ ಬಾಂಬೆ ಹೈಕೋರ್ಟ್, ಡಿಆರ್‌ಐಗೆ ತಡೆಯಾಜ್ಞೆ ನೀಡಿತ್ತು. ಇದರ ವಿರುದ್ಧ ಡಿಆರ್‌ಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಆರ್‌ಐ ತನಿಖೆಗೆ ಸಂಬಂಧಿಸಿದಂತೆ ಹಳೆಯ ಆರೋಪಗಳನ್ನೇ ಹೊಸದಾಗಿ ಉಲ್ಲೇಖಿಸಲಾಗುತ್ತಿದೆ ಎಂದು ಹೇಳಿದೆ.

ಇಂಡೊನೇಷ್ಯಾದಿಂದ ತರಿಸಲಾದ ಕಲ್ಲಿದ್ದಲಿಗೆ ಅಧಿಕ ಮೌಲ್ಯ ನಿಗದಿ ಕುರಿತ ಆರೋಪ ಕುರಿತು ಡಿಆರ್‌ಐ ಕೋರಿದ್ದ ಮಾಹಿತಿಗಳನ್ನು 4 ವರ್ಷಗಳ ಹಿಂದೆಯೇ ಸಮೂಹವು ನೀಡಿದೆ. ಆ ಬಳಿಕ ಡಿಆರ್‌ಐ ಯಾವುದೇ ಹೆಚ್ಚುವರಿ ಮಾಹಿತಿ ಕೋರಿಲ್ಲ ಅಥವಾ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ ಎಂದೂ ಅದಾನಿ ಸಮೂಹವು ಪ್ರತಿಕ್ರಿಯಿಸಿದೆ.

Highlights - ಚುನಾವಣೆ ಹೊತ್ತಿನಲ್ಲಿ ವಿವಾದದ ಕೇಂದ್ರದಲ್ಲಿ ಅದಾನಿ ಸಮೂಹ  ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಪ್ರತಿಪಕ್ಷಗಳ ಆಗ್ರಹ ಇಂಡೊನೇಷ್ಯಾದಿಂದ ತರಿಸಿದ್ದ ಕಲ್ಲಿದ್ದಲು, ತಮಿಳುನಾಡು ಕಂಪನಿಗೆ ಮಾರಾಟ

Quote - ಅದಾನಿ ಸಮೂಹವು ಈ ವಹಿವಾಟಿನಿಂದ ಹೆಚ್ಚುವರಿಯಾಗಿ ₹ 3000 ಕೋಟಿ ಲಾಭ ಗಳಿಸಿತು. ಇದರಿಂದ ವಿದ್ಯುತ್‌ ಶುಲ್ಕವನ್ನು ಪಾವತಿಸಿದ್ದ ಜನಸಾಮಾನ್ಯರು ಪರಿತಪಿಸಿದರು. ಇನ್ನೊಂದೆಡೆ ಅಗ್ಗದ ಕಲ್ಲಿದ್ದಲು ಬಳಕೆಯಿಂದ ವಾಯುಮಾಲಿನ್ಯವು ಆಯಿತು. ಜೈರಾಮ್‌ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT