ತಿರುವನಂತಪುರ(ಪಿಟಿಐ): ದೇಶದಲ್ಲಿ ‘ಹಿಂದುತ್ವದ ತಾಲಿಬಾನೀಕರಣ’ ಶುರುವಾಗಿದೆಯೇ ಎಂದು ತಿರುವನಂತಪುರದ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಇತ್ತೀಚೆಗೆ ತಮ್ಮ ಕಚೇರಿಗೆ ಮಸಿ ಬಳಿದ ಪ್ರಕರಣದ ಸಂಬಂಧ ತರೂರ್ ಈ ರೀತಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾಗುವ ಅಪಾಯವಿದೆ. ಭಾರತ ‘ಹಿಂದೂ ಪಾಕಿಸ್ತಾನ’ವಾಗಲಿದೆ ಎಂದು ತರೂರ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಬಿಜೆಪಿಯವರ ಕಣ್ಣು ಕೆಂಪಗಾಗಿಸಿತ್ತು.
‘ಬಿಜೆಪಿಯವರಂತೆ ನಾನು ಹಿಂದೂ ಅಲ್ಲವಂತೆ. ಹಾಗಾಗಿ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಿದ್ದಾರೆ. ನಾನು ಹಿಂದೂ ಅಲ್ಲ ಎಂದು ನಿರ್ಧರಿಸುವ ಮತ್ತು ಭಾರತ ಬಿಟ್ಟು ಹೋಗುವಂತೆ ಹೇಳುವ ಹಕ್ಕನ್ನು ಬಿಜೆಪಿಯವರಿಗೆ ಕೊಟ್ಟವರು ಯಾರು’ ಎಂದು ಶಶಿ ತರೂರ್ ಕಿಡಿ ಕಾರಿದ್ದಾರೆ.
‘ಬಿಜೆಪಿಯ ಹಿಂದೂ ರಾಷ್ಟ್ರದ ಸಿದ್ಧಾಂತ ನಿಜಕ್ಕೂ ದೇಶಕ್ಕೆ ದೊಡ್ಡ ಅಪಾಯ ತಂದೊಡ್ಡಲಿದೆ. ದೇಶದಲ್ಲಿ ಹಿಂದುತ್ವದ ತಾಲಿಬಾನೀಕರಣ ಶುರುವಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಸಿ ಬಳಿದ ಐವರ ಬಂಧನ:
ತರೂರ್ ಕಚೇರಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ಯುವಮೋರ್ಚಾದ ಐವರನ್ನು ಕಾರ್ಯಕರ್ತರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.