ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ ಜೋಡೊ ನ್ಯಾಯ ಯಾತ್ರೆ'ಯಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಭಾನುವಾರ (ಫೆ.25ರಂದು) ಭಾಗವಹಿಸಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಉಭಯ ಪಕ್ಷಗಳ ನಡುವಣ ಸೀಟು ಹಂಚಿಕೆ ಮಾತುಕತೆ ಅಂತಿಮಗೊಳ್ಳುತ್ತಿದ್ದಂತೆ ಈ ಮಾಹಿತಿ ಹೊರಬಿದ್ದಿದೆ.
ಉತ್ತರ ಪ್ರದೇಶದಲ್ಲಿ ಯಾತ್ರೆಯ ಮೊದಲ ಹಂತವು ಬುಧವಾರ (ಫೆ.21ರಂದು) ಮುಕ್ತಾಯವಾಗಿದ್ದು, ಎರಡನೇ ಹಂತವು ಭಾನುವಾರ (ಫೆ.25ರಂದು) ಆಗ್ರಾದಿಂದ ಆರಂಭವಾಗಲಿದೆ. 'ಅಖಿಲೇಶ್ ಯಾದವ್ ಅವರು ಫೆಬ್ರುವರಿ 25ರಂದು ಆಗ್ರಾದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ತಿಳಿಸಿದ್ದಾರೆ.
ಯಾತ್ರೆಯ ಮೊದಲ ಹಂತದ ವೇಳೆ ಅಮೇಠಿ ಇಲ್ಲವೇ ರಾಯ್ಬರೇಲಿಯಲ್ಲಿ ಅಖಿಲೇಶ್ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಸೀಟು ಹಂಚಿಕೆ ಅಂತಿಮಗೊಂಡ ನಂತರವಷ್ಟೇ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.
ಇಬ್ಬರೂ ನಾಯಕರು ಭಾನುವಾರ ನಗರಕ್ಕೆ ಬರುವ ಸಂದರ್ಭ ಅದ್ಧೂರಿಯಾಗಿ ಸ್ವಾಗತ ಕೋರಲು ಸಿದ್ಧತೆ ನಡೆಯುತ್ತಿದೆ. ಆದರೆ, ಅಖಿಲೇಶ್ ಯಾದವ್ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಸ್ಪಿ ಮೂಲಗಳು ತಿಳಿಸಿವೆ.
17 ಕಡೆ ಕಾಂಗ್ರೆಸ್ ಸ್ಪರ್ಧೆ
ಲೋಕಸಭೆಯ 80 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17 ಕಡೆ, ಎಸ್ಪಿ 62 ಕ್ಷೇತ್ರಗಲ್ಲಿ ಕಣಕ್ಕಿಳಿಯಲು ಮತ್ತು ಒಂದು ಕ್ಷೇತ್ರವನ್ನು ಭೀಮ್ ಆರ್ಮಿ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆ ಬುಧವಾರ ಮಾತುಕತೆಯಾಗಿದೆ.
ಅಮೇಠಿ, ರಾಯ್ಬರೇಲಿ, ಕಾನ್ಪುರ, ಝಾನ್ಸಿ, ಬಾರಾಬಂಕಿ, ಸೀತಾಪುರ, ಕೈಸರ್ಗಂಜ್, ವಾರಾಣಸಿ, ಅಮ್ರೋಹಾ, ಸಹರಾನ್ಪುರ, ಗೌತಮ್ ಬುದ್ಧ ನಗರ, ಘಾಜಿಯಾಬಾದ್, ಬುಲಂದ್ಶಹರ್, ಫತೇಪುರ್ ಸಿಕ್ರಿ, ಹಾಥರಸ್, ಮಹಾರಾಜ್ಗಂಜ್ ಹಾಗೂ ಬಾಗ್ಪತ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎನ್ನಲಾಗಿದೆ.