ಜಮ್ಮು: ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದ್ದು, ಸತತ ನಾಲ್ಕನೇ ದಿನವೂ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 15,000 ಸಾವಿರಕ್ಕೂ ಹೆಚ್ಚು ಯಾತ್ರಿಕರು ಜಮ್ಮು ಮತ್ತು ಇತರ ಸ್ಥಳಗಳಲ್ಲಿ ಸಿಲುಕಿದ್ದಾರೆ.
ವಿಪರೀತ ಮಳೆಯಿಂದಾಗಿ ರಂಬನ್ ಜಿಲ್ಲೆಯಲ್ಲಿ ಭೂಕುಸಿತ ಹೆಚ್ಚುತ್ತಿರುವುದು ಹೆದ್ದಾರಿ ಬಂದ್ ಮಾಡುವಂತೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಜಮ್ಮುವಿನಿಂದ ಇನ್ನೂ ಯಾತ್ರೆ ಪುನರಾರಂಭಗೊಂಡಿಲ್ಲ. ಜಮ್ಮು ಶಿಬಿರದಿಂದ ಕಾಶ್ಮೀರದತ್ತ ತೆರಳಲು ಹೊಸದಾಗಿ ಯಾವುದೇ ತಂಡಕ್ಕೆ ಮಂಗಳವಾರ ಅವಕಾಶ ಕಲ್ಪಿಸಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಚಾರ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿ ಇಡೀ ದಿನ ಸಾಮೂಹಿಕವಾಗಿ ಶ್ರಮಿಸಿದ್ದರ ಫಲವಾಗಿ ರಸ್ತೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದಾಗ್ಯೂ ಸಂಪೂರ್ಣವಾಗಿ ಹಿಂದಿನ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಬೇಕಾಗುತ್ತದೆ. ಮಂಗಳವಾರವೂ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಸಂಚಾರ ಪ್ರಾಧಿಕಾರ ಸೋಮವಾರ ರಾತ್ರಿ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.