ನವದೆಹಲಿ: ಜಲ ಕಾಯ್ದೆ 1974ರ ಅಡಿಯ ಕೆಲವು ಸಣ್ಣ ಲೋಪಗಳನ್ನು ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಯಿಂದ ಹೊರತರುವ ಪ್ರಸ್ತಾವ ಇರುವ ಮಸೂದೆಗೆ ರಾಜ್ಯಸಭೆಯು ಮಂಗಳವಾರ ಅಂಗೀಕಾರ ನೀಡಿದೆ.
ಜಲ ತಿದ್ದುಪಡಿ ಮಸೂದೆಯು ವಾಣಿಜ್ಯ ವಹಿವಾಟು ನಡೆಸುವುದನ್ನು ಸುಲಲಿತ ಆಗಿಸುವ ಉದ್ದೇಶಕ್ಕೆ ಪೂರಕವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಸದನಕ್ಕೆ ತಿಳಿಸಿದರು. ಈ ತಿದ್ದುಪಡಿಯ ಪ್ರಕಾರ ದಂಡದ ಮೊತ್ತವು ₹10 ಸಾವಿರದಿಂದ ₹15 ಲಕ್ಷದವರೆಗೆ ಇರಲಿದೆ.
ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತವನ್ನು ಪರಿಸರ ಸಂರಕ್ಷಣಾ ನಿಧಿಯಲ್ಲಿ ಇರಿಸಲಾಗುತ್ತದೆ. ಈ ನಿಧಿಯಲ್ಲಿನ ಶೇಕಡ 75ರಷ್ಟು ಮೊತ್ತವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲಾಗುವುದು ಎಂದು ಯಾದವ್ ಅವರು ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧ್ಯಕ್ಷರನ್ನು ಹೇಗೆ ನಾಮನಿರ್ದೇಶನ ಮಾಡಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರವು ನಿಯಮ ರೂಪಿಸಲಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.