ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರತಿಪಕ್ಷಗಳಾದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ (ಟಿಡಿಪಿ) ಹಾಗೂ ನಟ, ರಾಜಕಾರಣಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನಂತಪುರ ಜಿಲ್ಲೆಯ ರಾಪ್ತಾಡುವಿನಲ್ಲಿ ಇಂದು (ಸೋಮವಾರ) ನಡೆದ ರಾಜಕೀಯ ಸಮಾವೇಶದಲ್ಲಿ ಮಾತನಾಡಿರುವ ಅವರು, ‘ನಮ್ಮ ಪಕ್ಷದ (ವೈಎಸ್ಆರ್ಸಿಪಿ) ಚುನಾವಣಾ ಚಿಹ್ನೆಯಾದ ಸೀಲಿಂಗ್ ಫ್ಯಾನ್ ಯಾವಾಗಲೂ ಮನೆಯೊಳಗಿರಬೇಕು. ಆದರೆ, ವಿಪಕ್ಷಗಳಾದ ಸೈಕಲ್ ಅನ್ನು (ಟಿಡಿಪಿ ಪಕ್ಷದ ಚಿಹ್ನೆ) ಮನೆಯಿಂದ ಹೊರಗೆ ಮತ್ತು ಬಳಸಿದ ಲೋಟಾವನ್ನು (ಜನಸೇನಾ ಪಕ್ಷದ ಚಿಹ್ನೆ) ಅಡುಗೆ ಮನೆಯ ಸಿಂಕ್ನಲ್ಲಿ ಇಡಬೇಕು’ ಎಂದು ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದಾರೆ.
ಈ ವಿಡಿಯೊವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ‘ರಾಜ್ಯದ ಮತದಾರರು ವೈಎಸ್ಆರ್ಸಿಪಿಗೆ ಮತ ಚಲಾಯಿಸುವ ಮೂಲಕ ವಿಪಕ್ಷಗಳಾದ ಟಿಡಿಪಿ ಮತ್ತು ಜನಸೇನಾಗೆ ತಕ್ಕ ಪಾಠ ಕಲಿಸಬೇಕು’ ಎಂದು ಬರೆದುಕೊಂಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ವೈಎಸ್ಆರ್ಸಿಪಿ ಹಾಗೂ ಕಾಂಗ್ರೆಸ್, ಟಿಡಿಪಿ –ಜನಸೇನಾ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.