ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಇತರೆ ಸಚಿವರು ಮತ್ತು ಎಎಪಿ ನಾಯಕರ ಜೊತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಪ್ರಮುಖ ಸಂಚುಕೋರರಾಗಿದ್ದು, 10 ದಿನ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯವು(ಇ.ಡಿ) ನ್ಯಾಯಾಲಯಕ್ಕೆ ಮನವಿ ಮಾಡಿದೆ.
2021–22ರ ಅಬಕಾರಿ ನೀತಿ ರಚನೆ ಮತ್ತು ಜಾರಿ ಸಂಬಂಧ ಕೇಜ್ರಿವಾಲ್, ಹಲವು ಕೋಟಿಗಳಷ್ಟು ಹಣವನ್ನು ದಕ್ಷಿಣ ಸಮೂಹದಿಂದ ಪಡೆದುಕೊಂಡಿದ್ದಾರೆ ಎಂದು ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರಿಗೆ ಇ.ಡಿ ಪರ ವಕೀಲರು ತಿಳಿಸಿದ್ದಾರೆ.
ದಕ್ಷಿಣದ ಸಮೂಹವೊಂದರ ಆರೋಪಿಯೊಬ್ಬರಿಂದ ಪಂಜಾಬ್ ಚುನಾವಣೆಗಾಗಿ ಕೇಜ್ರಿವಾಲ್ ಅವರು ₹100 ಕೋಟಿ ಡಿಮ್ಯಾಂಡ್ ಮಾಡಿದ್ದರು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್ಜಿ) ಎಸ್.ವಿ. ರಾಜು ಇ.ಡಿ ಪರ ವಾದ ಮಂಡಿಸಿದ್ದಾರೆ.
4 ಹವಾಲಾ ಮಾರ್ಗಗಳಿಂದ ಬಂದ ₹45 ಕೋಟಿ ಹಣವನ್ನು ಗೋವಾ ಚುನಾವಣೆಗೆ ಬಳಸಲಾಗಿದೆ ಎಂದೂ ಅವರು ವಾದಿಸಿದ್ದಾರೆ.
ಆರೋಪಿಗಳು ಮತ್ತು ಸಾಕ್ಷಿಗಳ ಕರೆಗಳ ದಾಖಲೆಯು ಇದನ್ನು ದೃಢೀಕರಿಸಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಆರೋಪದಡಿ ಗುರುವಾರ ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿದ ಇ.ಡಿ, ಇಂದು ಮಧ್ಯಾಹ್ನ 2ರ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.