ನವದೆಹಲಿ: ‘ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಆರು ಸದಸ್ಯರ ಸ್ಥಾಯಿ ಸಮಿತಿ ಆಯ್ಕೆಯ ಸಂದರ್ಭದಲ್ಲಿ ನನ್ನ ಮೇಲೆ ಬಿಜೆಪಿ ಕೌನ್ಸಿಲರ್ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಹೋದ್ಯೋಗಿ ಅಶು ಠಾಕೂರ್ ಅವರ ಮೇಲೂ ಬಿಜೆಪಿ ಕೌನ್ಸಿಲರ್ ಹಲ್ಲೆ ನಡೆಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.
‘ಆರು ಸದಸ್ಯರ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಒಂದು ಮತವನ್ನು ಅಮಾನ್ಯವೆಂದು ಮೇಯರ್ ಶೆಲ್ಲಿ ಒಬೆರಾಯ್ ಘೋಷಿಸಿದ ನಂತರ, ಸಭೆಯಲ್ಲಿ ಗಲಾಟೆ ಶುರುವಾಯಿತು. ಬಿಜೆಪಿ ಸದಸ್ಯರು ಮೇಜಿನ ಮೇಲೆ ಹತ್ತಿ ಘೋಷಣೆಗಳನ್ನು ಕೂಗಿದರು.
‘ಈ ವೇಳೆ ಬಿಜೆಪಿ ಕೌನ್ಸಿಲರ್ಗಳಾದ ರವಿ ನೇಗಿ, ಅರ್ಜುನ್ ಮಾರ್ವಾ, ಚಂದನ್ ಚೌಧರಿ ನನ್ನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಒಬೆರಾಯ್ ದೂರಿದ್ದಾರೆ.
ಎಎಪಿ ಮಹಿಳಾ ಕೌನ್ಸಿಲರ್, ಮೇಯರ್ ಮೇಲಿನ ಹಲ್ಲೆ ಕುರಿತು ಕಮ್ಲಾ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಎಎಪಿ ಶಾಸಕಿ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.