ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ: ಅಯೋಧ್ಯೆಯಲ್ಲಿ ಸಡಗರ

ಇಡೀ ದೇಶ ಕಾಯುತ್ತಿರುವ ಐತಿಹಾಸಿಕ ಸಮಾರಂಭ ನಾಳೆ
Published 20 ಜನವರಿ 2024, 16:20 IST
Last Updated 20 ಜನವರಿ 2024, 16:20 IST
ಅಕ್ಷರ ಗಾತ್ರ

ಅಯೋಧ್ಯೆ: ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದ್ದು, ಇಡೀ ಅಯೋಧ್ಯೆಯನ್ನು ‘ಧಾರ್ಮಿಕ ಉತ್ಸಾಹ’ ಆವರಿಸಿಕೊಂಡಿದೆ. ದೇಶದ ವಿವಿಧ ಭಾಗಗಳಲ್ಲೂ ಸಡಗರ ಮನೆಮಾಡಿದೆ. 

ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಸೋಮವಾರ (ಜನವರಿ 22) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. 

ಮಂದಿರವನ್ನು ಹೂವುಗಳು ಮತ್ತು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ. ‘ಇಡೀ ಮಂದಿರದ ಅಲಂಕಾರಕ್ಕೆ ನೈಸರ್ಗಿಕ ಹೂವುಗಳನ್ನು ಮಾತ್ರ ಬಳಸಲಾಗಿದೆ. ಚಳಿಗಾಲವಾದ್ದರಿಂದ ಹೂವುಗಳು ಬೇಗ ಬಾಡಿ ಹೋಗದು. ಪ್ರಾಣ ಪ್ರತಿಷ್ಠಾ‍ಪನೆಯ ದಿನದವರೆಗೂ ತಾಜಾ ಆಗಿ ಇರಲಿದೆ. ಹೂಗಳ ಪರಿಮಳ ಮತ್ತು ಸೌಂದರ್ಯದಿಂದ ಮಂದಿರದಲ್ಲಿ ದೈವತ್ವದ ಇನ್ನೊಂದು ಪದರ ರೂಪುಗೊಂಡಂತೆ ಭಾಸವಾಗುತ್ತಿದೆ’ ಎಂದು ಮೂಲಗಳು ಹೇಳಿವೆ. 

ವಿದ್ಯುತ್‌ ದೀಪಾಲಂಕಾರಕ್ಕೆ ಹಣತೆ ಮಾದರಿಯ ದೀಪಗಳನ್ನು ಬಳಸಲಾಗಿದೆ. ಇದು ಮಂದಿರಕ್ಕೆ ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ ಎಂದು ಟ್ರಸ್ಟ್‌ ಅಧಿಕಾರಿಯೊಬ್ಬರು ತಿಳಿಸಿದರು. ‘ಗರ್ಭಗುಡಿಯ ಒಳಭಾಗದಲ್ಲಿ ಸಾಂಪ್ರದಾಯಿಕ ಹಣತೆಗಳನ್ನು ಬಳಸಲಾಗುವುದು’ ಎಂದು ಹೇಳಿದರು. 

‘ದೇವಾಲಯದ ಒಳಭಾಗದಲ್ಲಿ ಅಳವಡಿಸಿರುವ ದೀಪಗಳು ಮಂದವಾದ ಬೆಳಕು ಹೊರಸೂಸಲಿದ್ದು, ವಾಸ್ತುಶಿಲ್ಪದ ವೈಭವವನ್ನು ಸ್ಪಷ್ಟವಾಗಿ ತೆರೆದಿಡಲಿದೆ. ಹೊರ ಭಾಗದಲ್ಲಿನ ದೀಪಗಳನ್ನು ಸಂಜೆಯ ಬಳಿಕವಷ್ಟೇ ಉರಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಮಂದಿರದ ಆವರಣದ ಮುಖ್ಯ ದ್ವಾರವನ್ನು ಆಕರ್ಷಕವಾದ ಹೂವಿನ ವಿನ್ಯಾಸದಿಂದ ಅಲಂಕರಿಸಲಾಗಿದೆ. ದ್ವಾರದ ಎರಡೂ ಬದಿಗಳಲ್ಲಿ ಆನೆಗಳ ಪ್ರತಿಕೃತಿ ನಿಲ್ಲಿಸಲಾಗಿದೆ. 

ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ದೇವಾಲಯದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಅಂತಿಮ ಹಂತದ ತಯಾರಿಯ ಚಿತ್ರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಶನಿವಾರ ಬಿಡುಗಡೆಗೊಳಿಸಿದೆ.

‘ಮೇರೆ ಪ್ರಭು 500 ಸಾಲ್‌ ಬಾದ್ ಅಯೋಧ್ಯಾಜಿ ಆ ರಹಾ ಹೆ... ಖುಷಿ ತೋ ಹೋಗಿ ಹಿ’ (ಭಗವಾನ್‌ ಶ್ರೀರಾಮ 500 ವರ್ಷಗಳ ಬಳಿಕ ಅಯೋಧ್ಯೆಗೆ ಬರುತ್ತಿದ್ದಾನೆ. ನನಗೆ ಖುಷಿಯಾಗುತ್ತಿದೆ) ಎಂದು ಇಲ್ಲಿನ ನಿವಾಸಿ 65 ವರ್ಷದ ಶಾಂತಿ ದೇವಿ ಸಂತಸ ವ್ಯಕ್ತಪಡಿಸಿದರು.

ಸಾಕೇತ್‌ ಪದವಿ ಕಾಲೇಜಿನಿಂದ ಆರಂಭಗೊಂಡು ಸರಯೂ ನದಿ ದಡದಲ್ಲಿರುವ ನಯಾ ಘಾಟ್‌ವರೆಗೆ ಹರಡಿಕೊಂಡಿರುವ ಇಡೀ ಪಟ್ಟಣದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಪ್ರತಿಧ್ವನಿಸುತ್ತಿದೆ. ಭಗವಾನ್ ರಾಮನ ಜೀವನ ಮತ್ತು ಆದರ್ಶಗಳನ್ನು ತಿಳಿಸುವ ಮಹಾಕಾವ್ಯ ‘ರಾಮಚರಿತ ಮಾನಸ’ದ ಸಾಲುಗಳು, ಭಜನೆ ಹಾಗೂ ಕೀರ್ತನೆಗಳು ಇಲ್ಲಿನ ಮನೆ, ಅಂಗಡಿ ಹಾಗೂ ದೇವಾಲಯಗಳಿಂದ ಕೇಳಬರುತ್ತಿದೆ. 

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ ಬಾಲರಾಮನ ವಿಗ್ರಹವನ್ನು ಗುರುವಾರವೇ ಗರ್ಭಗುಡಿಯಲ್ಲಿ ಇಡಲಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿ ಧಾರ್ಮಿಕ ಆಚರಣೆಗಳು ಶನಿವಾರವೂ ನಡೆದವು.  

ಪೂರ್ವ ಭಾಗದ ದ್ವಾರದ ಮೂಲಕ ದೇವಾಲಯ ಪ್ರವೇಶಕ್ಕೆ ಹಾಗೂ ದಕ್ಷಿಣ ಭಾಗದ ದ್ವಾರದ ಮೂಲಕ ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪೂರ್ವ ಭಾಗದಿಂದ ಬರುವಾಗ ದೇವಾಲಯದ ಮುಖ್ಯ ಆವರಣ ತಲುಪಲು 32 ಮೆಟ್ಟಿಲುಗಳನ್ನು ಹತ್ತಬೇಕು.

ರಾಮ ಮಂದಿರವು ಮೂರು ಮಹಡಿಗಳನ್ನು ಹೊಂದಿದೆ. ಪ್ರತಿಯೊಂದು ಮಹಡಿ 20 ಅಡಿ ಎತ್ತರ ಇದೆ. ಮಂದಿರವು ಒಟ್ಟು 380 ಅಡಿ ಉದ್ದ (ಪೂರ್ವದಿಂದ ಪಶ್ಚಿಮ ಭಾಗಕ್ಕೆ), 250 ಅಡಿ ಅಗಲ ಹಾಗೂ 161 ಅಡಿ ಎತ್ತರ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT