ಮುಜಾಫರ್ಪುರ, ಬಿಹಾರ್: ಶಾಲಾ ಕೊಠಡಿಯಲ್ಲೇ ‘ಮೋದಿಗೆ ಯಾರೂ ಮತ ಹಾಕಬೇಡಿ’ ಎಂದು ಹೇಳಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮುಜಾಫರ್ಪುರ ಜಿಲ್ಲೆಯ ಆಮ್ರಕ್ ಎನ್ನುವ ಗ್ರಾಮದ ಹೈಸ್ಕೂಲ್ನಲ್ಲಿ ಹರೇಂದರ್ ರಜಾಕ್ ಎನ್ನುವರು ಪಾಠ ಹೇಳುವಾಗ ‘ಪಡಿತರ ಹೆಸರಿನಲ್ಲಿ ಜನರಿಗೆ ಕಳಪೆ ಆಹಾರ ಪದಾರ್ಥಗಳನ್ನು ಕಳುಹಿಸುವ ಮೋದಿಗೆ ಯಾರೂ ಮತ ಹಾಕಬೇಡಿ’ ಎಂದು ಹೇಳಿದ್ದರು. ಅಲ್ಲದೇ ಪದೇ ಪದೇ ಇದೇ ರೀತಿ ಅವರು ಹೇಳಿದ್ದರು ಎಂದು ದೂರಲಾಗಿದೆ.
ಪೋಷಕರ ಲಿಖಿತ ದೂರಿನ ಅನ್ವಯ ಜಿಲ್ಲಾ ಶಿಕ್ಷಣಾಧಿಕಾರಿ ಅಜಯ್ ಕುಮಾರ್ ಸಿಂಗ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಅಡಿ ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ತಿಳಿಸಿದ್ದರು. ಅದರ ಅನ್ವಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಹರೇಂದರ್ ರಜಾಕ್ ಅವರ ಮೇಲೆ ಕ್ರಮ ಜರುಗಿಸಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ ಎಂದು ಮುಜಾಫರ್ಪುರ ಎಎಸ್ಪಿ ರಾಕೇಶ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.