ಫರೀದಾಬಾದ್: ಹರಿಯಾಣದ ಕೋಮು ಗಲಭೆಯ ಪ್ರಮುಖ ಆರೋಪಿಯಾಗಿರುವ ಗೋರಕ್ಷಕ ಬಿಟ್ಟು ಬಜರಂಗಿ ಸೋದರನ ಮೇಲೆ ಗುಂಪೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಬಾಬಾ ಮಂಡಿ ಬಳಿಯ ಚಾಚಾ ಚೌಕ್ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಬಜರಂಗಿ ಅವರ ಕಿರಿಯ ಸಹೋದರ ಮಹೇಶ್ ಪಾಂಚಾಲ್ ಮೇಲೆ ದಾಳಿ ನಡೆಸಿದ ಐದು ಜನರಿದ್ದ ಗುಂಪೊಂದು ಮೊದಲು ಹಲ್ಲೆ ನಡೆಸಿತ್ತು. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ದಾಳಿ ನಡೆಸಿದ ಗುಂಪಿನಲ್ಲಿದ್ದ ಒಬ್ಬ ಸದಸ್ಯನನ್ನು ಗಾಯಾಳು ಮಹೇಶ್ ಗುರುತಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.