ರಾಯಪುರ: ಅಪರಾಧ ದಾಖಲೆಗಳ ವಿವರಗಳನ್ನು ಸಲ್ಲಿಸದ ಛತ್ತೀಸಗಢದ 83 ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾ ಅಧಿಕಾರಿಗೆ ಪ್ರತಿಪಕ್ಷ ಬಿಜೆಪಿ ದೂರು ಸಲ್ಲಿಸಿದೆ.
ಆಯ್ಕೆಯಾದ 48 ಗಂಟೆಗಳ ಒಳಗೆ ಅಭ್ಯರ್ಥಿಗಳು ತಮ್ಮ ಅಪರಾಧ ದಾಖಲೆಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಈ ಆದೇಶವನ್ನು ಕಾಂಗ್ರೆಸ್ ಉಲ್ಲಂಘಿಸಿದೆ ಎಂದು ಬಿಜೆಪಿ ಆರೋಪಿಸಿದೆ.
‘ಆಯ್ಕೆಯಾದ 48 ಗಂಟೆಗಳ ಒಳಗೆ ಅಪರಾಧ ದಾಖಲೆಗಳನ್ನು ಬಹಿರಂಂಗಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಕಾಂಗ್ರೆಸ್ 83 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದು, ಈ 83 ಅಭ್ಯರ್ಥಿಗಳ ಅಪರಾಧ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ. ಪಕ್ಷದ ವೆಬ್ಸೈಟ್ನಲ್ಲೂ ಈ ಬಗ್ಗೆ ವಿವರಗಳಿಲ್ಲ. ರಾಷ್ಟ್ರೀಯ ಮತ್ತು ಸ್ಥಳೀಯ ಎರಡು ಪತ್ರಿಕೆಗಳಲ್ಲಿಯೂ ಈ ಬಗ್ಗೆ ಪ್ರಕಟಣೆ ನೀಡಿಲ್ಲ’ ಎಂದು ಬಿಜೆಪಿಯ ರಾಜ್ಯ ಕಾನೂನು ಕೋಶದ ಸಂಚಾಲಕ ಜೈಪ್ರಕಾಶ್ ಚಂದ್ರವಂಶಿ ಆರೋಪಿಸಿದ್ದಾರೆ.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ವಕ್ತಾರ ಧನಂಜಯ್ ಸಿಂಗ್ ಠಾಕೂರ್, ‘ಅಪರಾಧ ಪ್ರವೃತ್ತಿ ಹೊಂದಿರುವವರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಆಡಳಿತ ಪಕ್ಷದ ವಿರುದ್ಧ ಸುಳ್ಳು ಆಪಾದನೆ ಮಾಡುವುದೇ ಬಿಜೆಪಿಯ ಕೆಲಸವಾಗಿದೆ. ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡಗಳನ್ನು ನಾವು ಪಾಲಿಸುತ್ತಿದ್ದೇವೆ’ ಎಂದರು.
ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.