ನವದೆಹಲಿ: ಕಾಂಗ್ರೆಸ್ನ ಗ್ಯಾರಂಟಿಗಳನ್ನು ನಕಲು ಮಾಡಿ, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಮಾಡಿರುವ ಖರ್ಗೆ, ‘ಬಿಜೆಪಿಗೆ ಯಾವುದೇ ಉದ್ದೇಶಗಳು ಹಾಗೂ ನೀತಿಗಳಿಲ್ಲ. ಕಾಂಗ್ರೆಸ್ ಸಾರ್ವಜನಿಕರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ಬಲವಾದ ಕಾರ್ಯಕ್ರಮಗಳನ್ನು ನೀಡಿದೆ’ ಎಂದು ಹೇಳಿದ್ದಾರೆ.
‘ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಾಗೂ ಬಿಜೆಪಿಯು ಹಲವು ಪ್ರಯತ್ನಗಳನ್ನು ನಡೆಸಿದ ನಂತರ, ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ನಕಲು ಮಾಡುವುದು ಉತ್ತಮ ಎಂದು ಭಾವಿಸಿದೆ. ಅಲ್ಲದೆ, ಚುನಾವಣೆಯ ಮೊದಲು ಬಿಜೆಪಿ ತನ್ನ ಕಾರ್ಯಸೂಚಿಗಳನ್ನು ಅವಸರದಲ್ಲಿ ಪೂರೈಸುವ ವಿಫಲ ಪ್ರಯತ್ನಗಳನ್ನು ಮಾಡಿದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
‘ರಾಜ್ಯದಲ್ಲಿ ಜನರಿಗಾಗಿ ಕಾಂಗ್ರೆಸ್ ಕೆಲಸ ಮಾಡಿದೆ ಮತ್ತು ನೀಡಿರುವ ಏಳು ಗ್ಯಾರಂಟಿಗಳನ್ನು ಪಕ್ಷ ಈಡೇರಿಸುತ್ತದೆ ಎಂದು ರಾಜಸ್ಥಾನದ ಜನರಿಗೆ ತಿಳಿದಿದೆ’ ಎಂದು ಖರ್ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.