ನವದೆಹಲಿ: ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಸಂಸದ ಡ್ಯಾನಿಶ್ ಅಲಿ ಅವರನ್ನು ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಲೋಕಸಭೆಯಲ್ಲಿ ಅಸಂಸದೀಯ ಪದ ಬಳಸಿ ನಿಂದಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಅಥವಾ ಮಾನಹಾನಿ ಪದಗಳನ್ನು ಬಳಕೆ ಮಾಡಿರುವುದಕ್ಕಾಗಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ಮೇರೆಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
BJP issues show cause notice to party MP Ramesh Bidhuri on instruction of party president JP Nadda for his use of unparliamentary language against BSP MP Danish Ali: Sources pic.twitter.com/bT5JDhclCB
— ANI (@ANI) September 22, 2023
ಏನಿದು ಘಟನೆ?
ಲೋಕಸಭೆಯಲ್ಲಿ ಗುರುವಾರ ಚಂದ್ರಯಾನ–3ರ ಬಗ್ಗೆ ಚರ್ಚೆ ನಡೆಯುವ ವೇಳೆ ದಕ್ಷಿಣ ದೆಹಲಿಯ ಸಂಸದ ರಮೇಶ್ ಬಿಧೂರಿಯವರು ಡ್ಯಾನಿಶ್ ಅಲಿಯವರನ್ನು ಕುರಿತು ಅಸಂಸದೀಯ ಪದ ಬಳಸಿ ನಿಂದಿಸಿದ್ದರು. ಈ ವೇಳೆ ಸ್ಪೀಕರ್ ಪೀಠದಲ್ಲಿ ಕೋಡಿಕುನ್ನಿಲ್ ಸುರೇಶ್ ಅವರು ಇದ್ದರು.
ರಾಜನಾಥ್ ವಿಷಾದ: ರಮೇಶ್ ಬಿಧೂರಿ ಅವರ ಹೇಳಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.
‘ರಮೇಶ್ ಅವರ ಮಾತುಗಳನ್ನು ನಾನು ಕೇಳಿಸಿಕೊಂಡಿಲ್ಲ. ಅವರ ಮಾತುಗಳಿಂದ ವಿರೋಧ ಪಕ್ಷದ ಸದಸ್ಯರಿಗೆ ನೋವಾಗಿದ್ದರೆ ಅದನ್ನು ಕಡತದಿಂದ ತೆಗೆಯಬೇಕು ಎಂದು ನಾನು ಸ್ಪೀಕರ್ ಅವರನ್ನು ಕೋರುತ್ತೇನೆ’ ಎಂದು ಸಿಂಗ್ ಹೇಳಿದ್ದಾರೆ.
ಜೈರಾಮ್ ರಮೇಶ್ ವಾಗ್ದಾಳಿ: ‘ಡ್ಯಾನಿಶ್ ಅಲಿ ಅವರ ವಿರುದ್ಧ ರಮೇಶ್ ಅವರು ಹೇಳಿದ ಮಾತು ತೀವ್ರ ಖಂಡನೆಗೆ ಅರ್ಹವಾದುದು. ಇದನ್ನು ಎಷ್ಟು ನಿಂದಿಸಿದರೂ ಸಾಲದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕ್ಷಮೆ ಕೇಳಿದ್ದಾರೆ. ಆದರೆ ಅದು ಸಾಲದು. ನಾನು ಈ ಥರದ ಭಾಷೆಯನ್ನು ಕೇಳಿಯೇ ಇಲ್ಲ. ಇಂತ ಭಾಷೆಯನ್ನು ಸಂಸತ್ತಿನ ಒಳಗೂ, ಹೊರಗೂ ಉಪಯೋಗಿಸಕೂಡದು. ಇದು ಡ್ಯಾನಿಶ್ ಅಲಿ ಅವರಿಗೆ ಮಾತ್ರವಲ್ಲ, ನಮಗೆಲ್ಲರಿಗೂ ಮಾಡಿದ ಅವಮಾನ. ಹೊಸ ಸಂಸತ್ ಭವನದ ಆರಂಭದಲ್ಲಿ ರಮೇಶ್ ಅವರಿಂದ ಈ ಮಾತುಗಳು ಬಂದಿವೆ. ಇದು ಬಿಜೆಪಿಯವರ ಉದ್ದೇಶವನ್ನು ತೋರಿಸುತ್ತದೆ. ಅವರನ್ನು ಅಮಾನತುಗೊಳಿಸಿ, ಕಠಿಣ ಕ್ರಮ ತೆಗೆದುಕೊಳ್ಳಲು ಇದು ಸೂಕ್ತವಾದ ಪ್ರಕರಣ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.