ಪಟ್ನಾ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಜಯಗಳಿಸಲು ಆರ್ಜೆಡಿಯೇ ಕಾರಣ ಎಂದು ಎಐಎಂಐಎಂ ಮುಖಂಡ, ಹೈದರಾಬಾದ್ನ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
‘ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ’ ಎಂಬ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.
ಸಮಾಜವಾದಿ ಜನತಾದಳ (ಡಿ) ಸ್ಥಾಪಕ ದೇವೇಂದ್ರ ಪ್ರಸಾದ್ ಯಾದವ್ ಮತ್ತು ಒವೈಸಿ ಅವರು ಈಗ ಬಿಹಾರ ವಿಧಾನಸಭೆ ಚುನಾವಣೆಗಾಗಿ ಸಂಯುಕ್ತ ಪ್ರಜಾಸತ್ತಾತ್ಮಕ ಜಾತ್ಯತೀತ ರಂಗ (ಯುಡಿಎಸ್ಎ) ರಚಿಸಿಕೊಂಡಿದ್ದಾರೆ.
ಕಾಂಗ್ರೆಸ್ ಧೋರಣೆಯನ್ನು ಟೀಕಿಸಿದ ಅವರು, ‘ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು ಎಐಎಂಐಎಂ ಜೊತೆಗೆ ಕೈಜೋಡಿಸಿತ್ತು. ಚುನಾವಣೆಯ ಬಳಿಕ ಶಿವಸೇನೆ ಜೊತೆಗೆ ಕೈಜೋಡಿಸಿತ್ತು. ಕಾಂಗ್ರೆಸ್ ಮುಖಂಡರು ನಮಗೆ ಜಾತ್ಯತೀತ ಪಾಠ ಹೇಳುವ ಅಗತ್ಯವಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
ಆರ್ಜೆಡಿ ಪಕ್ಷದ ಮುಖಂಡರು ತಮ್ಮನ್ನು ‘ಜಾತ್ಯತೀತ ಮತಗಳ ವಿಭಜಕ’ ಎಂದು ಟೀಕಿಸಿರುವುದನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಹಾರದಲ್ಲಿ ಆರ್ಜೆಡಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಲು ತಮ್ಮ ಪಕ್ಷವೇ ಕಾರಣ ಎಂದು ಮರೆಯಬಾರದು ಎಂದರು.