ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ ಸಿಎಂ ಆಯ್ಕೆ: BJP ಶಾಸಕಾಂಗ ಪಕ್ಷದ ಸಭೆ ನಾಳೆ, ಜೂನ್ 12ರಂದು ಸರ್ಕಾರ ರಚನೆ

Published 10 ಜೂನ್ 2024, 11:45 IST
Last Updated 10 ಜೂನ್ 2024, 11:45 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಸಾಧಿಸಿರುವ ಬಿಜೆಪಿ, ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ನಾಳೆ (ಮಂಗಳವಾರ) ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ಮರುದಿನವೇ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ನಾಲ್ಕು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಬಹುಮತ ಸಾಧಿಸಿದೆ. ಚುನಾವಣಾ ಫಲಿತಾಂಶ ಜೂನ್‌ 4ರಂದೇ ಹೊರಬಿದ್ದಿದೆಯಾದರೂ, ಈವರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ.

ಹಿರಿಯ ನಾಯಕ, ಸಂಸದ ಧರ್ಮೇಂದ್ರ ಪ್ರಧಾನ್‌ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಬಲವಾಗಿ ಕೇಳಿಬಂದಿತ್ತು. ಆದರೆ, ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವ ಕಾರಣ, ಇದೀಗ ಬ್ರಜರಾಜನಗರ್‌ ಶಾಸಕ ಸುರೇಶ್‌ ಪೂಜಾರಿ ಹೆಸರು ಮುನ್ನೆಲೆಗೆ ಬಂದಿದೆ.

'ಶಾಸಕಾಂಗ ಪಕ್ಷದ ಸಭೆ ಮಂಗಳವಾರ ನಡೆಯಲಿದೆ. ಜೂನ್‌ 12ರಂದು (ಬುಧವಾರ) ಹೊಸ ಸರ್ಕಾರ ರಚನೆಯಾಗಲಿದೆ' ಎಂದು ಒಡಿಶಾ ಬಿಜೆಪಿ ಉಸ್ತುವಾರಿ ವಿಜಯ್‌ ಪಾಲ್‌ ಸಿಂಗ್‌ ತೋಮರ್‌ ಹೇಳಿದ್ದಾರೆ.

ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್ ಹಾಗೂ ಭೂಪೇಂದ್ರ ಯಾದವ್‌ ಅವರನ್ನು ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ವೀಕ್ಷಕರನ್ನಾಗಿ ಬಿಜೆಪಿ ನೇಮಿಸಿದೆ.

'ವೀಕ್ಷಕರಾಗಿ ನೇಮಕಗೊಂಡಿರುವ ರಾಜನಾಥ್‌ ಸಿಂಗ್ ಹಾಗೂ ಭೂಪೇಂದ್ರ ಯಾದವ್‌ ಅವರನ್ನೊಳಗೊಂಡ ಅನುಭವಿ ನಾಯಕರ ತಂಡವು ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ' ಎಂದು ಪೂಜಾರಿ ಹೇಳಿದ್ದಾರೆ.

ಪೂಜಾರಿ ಮಾತ್ರವಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಾಮಲ್‌, ಕೆ.ವಿ ಸಿಂಗ್‌, ಮೋಹನ್‌ ಮಜ್ಹಿ ಅವರೂ ಸಿಎಂ ರೇಸ್‌ನಲ್ಲಿದ್ದಾರೆ.

ಈ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಅಚ್ಚರಿಯ ಆಯ್ಕೆಗಳನ್ನು ಮಾಡಿರುವ ಬಿಜೆಪಿ, ಇಲ್ಲಿಯೂ ಅಂತಹದೇ ಪ್ರಯೋಗ ಮಾಡಿದರೂ ಅಚ್ಚರಿಯಿಲ್ಲ.

ಜೂನ್‌ 12ರಂದು ಪ್ರಮಾಣವಚನ ಸಮಾರಂಭಕ್ಕೂ ಮುನ್ನ, ರಾಜ್ಯ ರಾಜಧಾನಿ ಭುವನೇಶ್ವರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ನಡೆಸಲು ಬಿಜೆಪಿ ಉದ್ದೇಶಿಸಿದೆ.

ಒಡಿಶಾದ ಲೋಕಸಭಾ ಹಾಗೂ ವಿಧಾನಸಭಾ ಸ್ಥಾನಗಳಿಗೆ ಮೇ 13, ಮೇ 20, ಮೇ 25 ಹಾಗೂ ಜೂನ್‌ 1ರಂದು ಮತದಾನ ನಡೆದಿತ್ತು. ಇಲ್ಲಿನ 21 ಲೋಕಸಭೆ ಸ್ಥಾನಗಳಲ್ಲಿ 20ನ್ನು ಬಿಜೆಪಿ ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT