ನವದೆಹಲಿ: ದೆಹಲಿಯ ವಿಧಾನಸಭೆ ಆವರಣದಲ್ಲಿ ಗುರುವಾರ ಆಡಳಿತಾರೂಢ ಆಮ್ ಆದ್ಮಿ (ಎಎಪಿ) ಹಾಗೂ ಪ್ರತಿಪಕ್ಷ ಬಿಜೆಪಿ ಪರಸ್ಪರ ದೋಷಾರೋಪಗಳನ್ನು ಮಾಡುತ್ತ ಏಕಕಾಲಕ್ಕೆ ಪ್ರತಿಭಟನೆ ನಡೆಸಿವೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.) ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬಿಜೆಪಿ ವಿರುದ್ಧ ಎಎಪಿ ಶಾಸಕರು ಪ್ರತಿಭಟನೆ ನಡೆಸಿದರು.
ಆತಿಶಿ ಹಾಗೂ ಸೌರಭ್ ಭಾರದ್ವಾಜ್ ಸೇರಿದಂತೆ ಪಕ್ಷದ ಇತರ ಪ್ರಮುಖ ನಾಯಕರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ‘ನಾನೂ ಕೇಜ್ರಿವಾಲ್’, ‘ಮೋದಿ ಹೆಚ್ಚು ಹೆದರುವ ವ್ಯಕ್ತಿ ಕೇಜ್ರಿವಾಲ್’ ಎಂಬ ಅರ್ಥದ ಸಾಲುಗಳನ್ನು ಬರೆದಿದ್ದ ಟೀಶರ್ಟ್ ಧರಿಸಿದ್ದರು.
ಘೋಷಣಾ ಫಲಕಗಳನ್ನು ಹಿಡಿದು ಬಿಜೆಪಿ ಶಾಸಕರು ಎಎಪಿ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಆಗ ಕೇಜ್ರಿವಾಲ್ ಅವರಿಗೆ ಬೆಂಬಲ ಸೂಚಿಸಿ ಎಎಪಿ ಶಾಸಕರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತ, ಬಿಜೆಪಿ ಪ್ರತಿಭಟನೆಯ ಹಿಂದೆಯೇ ಸಾಗಿದರು.
‘ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಹತ್ತಾರು ಭ್ರಷ್ಟಾಚಾರದ ಆರೋಪಗಳಿವೆ. ಅಬಕಾರಿ ನೀತಿ ವಿಶ್ವ ದರ್ಜೆಯದ್ದಾಗಿದ್ದರೆ ಅದನ್ನು ಅವರೇಕೆ ಹಿಂಪಡೆದರು? ನಾವು ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ’ ಎಂದು ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧುರಿ ಹೇಳಿದರು.