ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಬಹಿರಂಗ ಪ್ರಚಾರಕ್ಕೆ ತೆರೆ

Published 28 ನವೆಂಬರ್ 2023, 15:08 IST
Last Updated 28 ನವೆಂಬರ್ 2023, 15:08 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆಬಿದ್ದಿತು. 119 ಸದಸ್ಯಬಲದ ರಾಜ್ಯ ವಿಧಾನಸಭೆಗೆ ಗುರುವಾರ ಚುನಾವಣೆ ನಡೆಯಲಿದೆ. ಇನ್ನು ಎರಡು ದಿವಸ ತೆರೆಮರೆಯ ಕಸರತ್ತುಗಳ ಕಡೆಗೆ ಪಕ್ಷಗಳು ಗಮನ ಹರಿಸಲಿವೆ.

ಚುನಾವಣಾ ಆಯೋಗವು ಅಕ್ಟೋಬರ್‌ 9ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಿದ ಬಳಿಕವೇ ತೆಲಂಗಾಣದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿದ್ದವು. ಸುದೀರ್ಘ ಅವಧಿಗೆ ಪ್ರಚಾರ ಕಾರ್ಯ ನಡೆದದ್ದು ತೆಲಂಗಾಣದಲ್ಲಿಯೇ.

‘ತೆಲಂಗಾಣವನ್ನು ಉತ್ತಮದಿಂದ ಅತ್ಯುತ್ತಮ ಮಾಡೋಣ’ ಎಂಬ ಘೋಷಣೆಯೊಂದಿಗೆ ಆಡಳಿತಾರೂಢ ಬಿಆರ್‌ಎಸ್‌ ಕಣಕ್ಕಿಳಿದಿದೆ. ‘ಮಾರ್ಪು ಕಾವಾಲಿ, ಕಾಂಗ್ರೆಸ್‌ ರಾವಾಲಿ’ (ಬದಲಾವಣೆ ಬೇಕು, ಕಾಂಗ್ರೆಸ್‌ ಬರಬೇಕು) ಎಂಬ ಘೋಷಣೆ ಜೊತೆ ಕಾಂಗ್ರೆಸ್ ಪ್ರಚಾರ ನಡೆಸಿದರೆ, ಬಿಜೆಪಿ ತನ್ನ ‘ಡಬಲ್‌ ಎಂಜಿನ್‌ ಸರ್ಕಾರ’ ಘೋಷಣೆಯನ್ನು ಇಲ್ಲೂ ಮೊಳಗಿಸಿತು.

ಚುನಾವಣಾ ದಿನಾಂಕ ಆರಂಭವಾಗುವ ಮೊದಲೇ ತೆಲಂಗಾಣಕ್ಕೆ ಬಂದು ಎರಡು ಸಾರ್ವಜನಿಕ ಸಭೆಗಳನ್ನು ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ದಿನಾಂಕ ಘೋಷಣೆಯಾದ ಬಳಿಕವೂ ರಾಜ್ಯಕ್ಕೆ ಐದು ಬಾರಿ ಆಗಮಿಸಿ, ಎಂಟು ರ‍್ಯಾಲಿಗಳನ್ನು ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು 17 ರ‍್ಯಾಲಿಗಳನ್ನು ನಡೆಸಿದರು.

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಹಲವು ಬಾರಿ ರಾಜ್ಯಕ್ಕೆ ಆಗಮಿಸಿ ಬಿರುಸಿನ ಪ್ರಚಾರ ನಡೆಸಿದರು. ರಾಹುಲ್‌ 23 ಸಾರ್ವಜನಿಕ ಸಭೆ ಮತ್ತು ರೋಡ್‌ಶೊಗಳಲ್ಲಿ ಪಾಲ್ಗೊಂಡಿದ್ದರೆ, ಪ್ರಿಯಾಂಕಾ ಅವರು 26 ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. 

ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್ ಅವರು ಸುಮಾರು 96 ಸಾರ್ವಜನಿಕ ಸಭೆಗಳನ್ನು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT