ಹೈದರಾಬಾದ್: ತೆಲಂಗಾಣದಲ್ಲಿ ಒಟ್ಟು ₹83,543 ಕೋಟಿ ವೆಚ್ಚದಲ್ಲಿ 15 ಹೊಸ ರೈಲು ಮಾರ್ಗಗಳು ಸೇರಿ 30 ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಭಾನುವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಬಿಆರ್ಎಸ್ ಅಸಹಕಾರದಿಂದಾಗಿ 700 ಕಿಲೋಮೀಟರ್ ರೈಲು ಹಳಿಗಳನ್ನು ಹಾಕುವ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.
‘ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಚುರುಕುಗೊಳಿಸುವಂತೆ, ಹೈದರಾಬಾದ್ನಲ್ಲಿ ಬಹು-ಮಾದರಿ ಸಾರಿಗೆ ವ್ಯವಸ್ಥೆಯ (ಎಂಎಂಟಿಎಸ್) ಎರಡನೇ ಹಂತದ ಯೋಜನೆಗಳಿಗೆ ಬೆಂಬಲ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದೇವೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ’ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷರೂ ಆಗಿರುವ ರೆಡ್ಡಿ ಆರೋಪಿಸಿದರು.
ತೆಲಂಗಾಣದಲ್ಲಿ 40 ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಮತ್ತು ಪುನರ್ ಅಭಿವೃದ್ಧಿಪಡಿಸಲು ಇತ್ತೀಚೆಗೆ ರೈಲ್ವೆ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₹ 2,300 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ 21 ನಿಲ್ದಾಣಗಳಿಗೆ ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ ಅಡಿಪಾಯ ಹಾಕಿದ್ದಾರೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.