ಗುವಾಹಟಿ:ಈಶಾನ್ಯ ರಾಜ್ಯಗಳಿಗೆ ವಿಶೇಷ ಸೌಲಭ್ಯಗಳ ಸ್ಥಾನಮಾನ ನೀಡಿರುವ ಸಂವಿಧಾನದ 371ನೇ ವಿಧಿಯನ್ನು ಮುಟ್ಟುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಸ್ಪಷ್ಟಪಡಿಸಿದ್ದಾರೆ.
370ನೇ ವಿಧಿ(ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದ ವಿಧಿ)ಯು ತಾತ್ಕಾಲಿಕವಾದದ್ದು. ಆದರೆ, 371ನೇ ವಿಧಿ ಈಶಾನ್ಯ ವಲಯಕ್ಕೆ ವಿಶೇಷ ಸೌಲಭ್ಯಗಳ ಸ್ಥಾನಮಾನ ಕಲ್ಪಿಸಿದ್ದು, ಎರಡೂ ವಿಧಿಗಳಿಗೆ ಸಾಕಷ್ಟು ವ್ಯತ್ಯಾಸವಿದೆ ಎಂದಿದ್ದಾರೆ.
ಭಾನುವಾರದಿಂದ ಎರಡು ದಿನ ಅಮಿತ್ ಶಾ ಅಸ್ಸಾಂನಲ್ಲಿ ಹಲವು ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಪಟ್ಟಿ ಬಿಡುಗಡೆಯಾದ ನಂತರದಲ್ಲಿ ಮೊದಲ ಬಾರಿಗೆ ಅಮಿತ್ ಶಾ ಅಸ್ಸಾಂ ಭೇಟಿ ನೀಡಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ಈಶಾನ್ಯ ಭಾಗದ ಜನರಿಗೆ ಸುಳ್ಳು ಮಾಹಿತಿಗಳ ಮೂಲಕ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಲಾಗಿದೆ. ಕೇಂದ್ರ 371ನೇ ವಿಧಿಯನ್ನೂ ರದ್ದು ಪಡಿಸಲಿದೆ ಎಂದು ತಪ್ಪು ಮಾಹಿತಿ ಹರಡಲಾಗುತ್ತಿದೆ‘ ಎಂದು ಆರೋಪಿಸಿದ್ದಾರೆ.
‘ಈ ಬಗ್ಗೆ ಸಂಸತ್ತಿನಲ್ಲಿಯೂ ನಾನು ಸ್ಪಷ್ಟಪಡಿಸಿದ್ದೇನೆ. ಈಗ ಈಶಾನ್ಯ ರಾಜ್ಯಗಳ ಎಂಟು ಮಂದಿ ಮುಖ್ಯಮಂತ್ರಿಗಳ ಎದುರಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ, ಕೇಂದ್ರ 371ನೇ ವಿಧಿಯನ್ನು ಮುಟ್ಟುವುದಿಲ್ಲ‘ ಎಂದು ಅಮಿತ್ ಶಾ ಹೇಳಿದ್ದಾರೆ.