ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ದೇವರನ್ನು ನಂಬಬೇಡಿ ಎಂದು ಪ್ರತಿಜ್ಞೆ ಮಾಡಿಸಿದ್ದ ಮುಖ್ಯೋಪಾಧ್ಯಾಯ ಬಂಧನ

Published 29 ಜನವರಿ 2024, 7:36 IST
Last Updated 29 ಜನವರಿ 2024, 7:36 IST
ಅಕ್ಷರ ಗಾತ್ರ

ಬಿಲಾಸ್‌ಪುರ: ಹಿಂದೂ ದೇವರುಗಳನ್ನು ನಂಬುವುದಿಲ್ಲ ಮತ್ತು ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇವೆ ಎಂದು ಜನರಿಂದ ಪ್ರತಿಜ್ಞೆ ಮಾಡಿಸಿದ್ದ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ 60 ವರ್ಷದ ಮುಖ್ಯೋಪಾಧ್ಯಾಯರನ್ನು ಬಂಧಿಸಲಾಗಿದೆ.

ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿನವೇ ಈ ಘಟನೆ ನಡೆದಿದ್ದು, ಮುಖ್ಯೋಪಾಧ್ಯಾಯ ರತನ್ ಲಾಲ್ ಸರೋವರ್ ಅವರನ್ನು ಅಮಾನತು ಮಾಡಿ ಜಿಲ್ಲಾ ಶಿಕ್ಷಣಾಧಿಕಾರಿ ಆದೇಶಿಸಿದ್ದರು.

ಜನವರಿ 22ರಂದು ರತನ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹತರಾಯ್ ಹಳ್ಳಿಯಲ್ಲಿ ಮಕ್ಕಳು ಸೇರಿದಂತೆ ಜನರ ಗುಂಪಿನಿಂದ ಈ ಪ್ರತಿಜ್ಞೆ ಮಾಡಿಸಲಾಗಿತ್ತು.

ಭಗವಾನ್ ಶಿವ, ರಾಮ ಮತ್ತು ಕೃಷ್ಣ ಸೇರಿದಂತೆ ಹಿಂದೂ ದೇವರುಗಳನ್ನು ಪೂಜಿಸುವುದಿಲ್ಲ ಮತ್ತು ಬೌದ್ಧ ಧರ್ಮವನ್ನು ಅನುಸರಿಸುವುದಾಗಿ ಜನರಿಂದ ಪ್ರತಿಜ್ಞೆ ಮಾಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸಂಬಂಧ ಬಲಪಂಥೀಯ ಸಂಘಟನೆಯ ಪದಾಧಿಕಾರಿ ರೂಪೇಶ್ ಶುಕ್ಲಾ ಅವರು ದೂರು ನೀಡಿದ್ದರು ಎಂದೂ ಅವರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಪ್ರತಿಜ್ಞೆಯ ವಿಡಿಯೊ ಹರಿದಾಡಿದ ಬಳಿಕ ಪ್ರಕರಣ ಬಯಲಾಗಿದೆ.

ಮುಖ್ಯೋಪಾಧ್ಯಾಯರ ಈ ಕೃತ್ಯವು ಸನಾತನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮುಖ್ಯೋಪಾಧ್ಯಾಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಪೂರ್ವಾಗ್ರಹ ಪೀಡಿತ ಕೃತ್ಯಗಳು) ಮತ್ತು 295ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT