ನವದೆಹಲಿ (ಪಿಟಿಐ): ಚೀನಾ ಒಡ್ಡುತ್ತಿರುವ ಬೆದರಿಕೆಗಳನ್ನು ವಿಶೇಷ ತಂತ್ರಗಾರಿಕೆ, ಜಾಣ್ಮೆಯಿಂದ ಎದುರಿಸಬೇಕೇ ಹೊರತು, ಬಡಾಯಿ ಕೊಚ್ಚಿಕೊಳ್ಳುವುದರಿಂದಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
‘ಗಡಿ ವಿಚಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಚೀನಾವನ್ನು ದೋಷಮುಕ್ತಗೊಳಿಸಿದ್ದಕ್ಕಾಗಿ ದೇಶ ಭಾರಿ ಬೆಲೆ ತೆರಬೇಕಾಗಿದೆ’ ಎಂದು ಅವರು ಟ್ವೀಟ್ಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಉತ್ತರಾಖಂಡದಲ್ಲಿ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಗುಂಟ ಸೇನೆಗೆ ಸಂಬಂಧಿಸಿ ಚೀನಾ ಹೊಸ ನಿರ್ಮಾಣಗಳನ್ನು ಕೈಗೆತ್ತಿಕೊಂಡಿರುವ ಕುರಿತ ವರದಿಗಳ ಹಿನ್ನೆಲೆಯಲ್ಲಿ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಚೀನಾದ ನಿರ್ಮಾಣಗಳನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಅವರು ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.