ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೇಶ್‌ಖಾಲಿಗೆ ಭೇಟಿ ನೀಡಬೇಕೆಂಬುದು ಮಮತಾಗೆ ಮನವರಿಕೆಯಾಗಿಲ್ಲ: ಸುವೇಂದು ಅಧಿಕಾರಿ

Published 11 ಮಾರ್ಚ್ 2024, 3:47 IST
Last Updated 11 ಮಾರ್ಚ್ 2024, 3:47 IST
ಅಕ್ಷರ ಗಾತ್ರ

ಕೋಲ್ಕತ್ತ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಭೂಹಗರಣ ಪ್ರಕರಣ ವರದಿಯಾಗಿರುವ ಸಂದೇಶ್‌ಖಾಲಿಗೆ ಭೇಟಿ ನೀಡುವುದು ಅಗತ್ಯ ಎಂಬುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವರಿಕೆಯಾಗಿಲ್ಲ ಎಂದು ಬಿಜೆಪಿ ನಾಯಕ ಸುವೇಂದ್ರು ಅಧಿಕಾರಿ ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆಸಿದ ಸಾರ್ವಜನಿಕ ಸಮಾವೇಶಗಳಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ್ದಾರೆ ಎಂದಿರುವ ಅಧಿಕಾರಿ, ಇಡೀ ದೇಶ ಸಂದೇಶ್‌ಖಾಲಿ ಜೊತೆ ನಿಂತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವನ್ನು ಸೋಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಅಧಿಕಾರಿ, 'ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು, ಸಂದೇಶ್‌ಖಾಲಿಯ ತಾಯಂದಿರು ಮತ್ತು ಸಹೋದರಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಕೃಷ್ಣನಗರ್‌, ಆರಮ್‌ಭಾಗ್‌, ಬಾರಾಸತ್‌ ಹಾಗೂ ಸಿಲಿಗುರಿಯಲ್ಲಿ ನಡೆಸಿದ ಸಾರ್ವಜನಿಕ ಸಮಾವೇಶಗಳಲ್ಲಿ ಪ್ರತಿಭಟಿಸಿದ್ದಾರೆ' ಎಂದು ಹೇಳಿದ್ದಾರೆ.

ದಕ್ಷಿಣ ಅಕ್ರತಲಾದಲ್ಲಿ ಮಾತನಾಡಿರುವ ಅಧಿಕಾರಿ, ಸಂದೇಶ್‌ಖಾಲಿ ಜನರ ಹೋರಾಟಕ್ಕೆ ಪ್ರಧಾನಿ ಸೆಲ್ಯೂಟ್ ಮಾಡಿದ್ದಾರೆ. ಅವರ ಸೂಚನೆಯಿಂದ ಸ್ಫೂರ್ತಿ ಪಡೆದು, ಸಂದೇಶ್‌ಖಾಲಿಯ ನಜತ್‌ನಲ್ಲಿ ರ‍್ಯಾಲಿ ನಡೆಸುವ ಸವಾಲನ್ನು ರಾಜ್ಯ ಬಿಜೆಪಿ ತೆಗೆದುಕೊಂಡಿದೆ ಎಂದು ಎಂದಿದ್ದಾರೆ.

ಸಂದೇಶ್‌ಖಾಲಿಯಲ್ಲಿ ಪ್ರತಿಭಟನೆಗಳು ಆರಂಭವಾಗಿ ಎರಡು ತಿಂಗಳು ಕಳೆದಿದೆ. ಆದರೂ, ಅಲ್ಲಿಗೆ ಭೇಟಿ ನೀಡುವ ಅಗತ್ಯವಿದೆ ಎಂಬುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವರಿಕೆಯಾಗಿಲ್ಲ' ಎಂದು ಟೀಕಿಸಿದ್ದಾರೆ.

ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಹೋರಾಟಗಾರ್ತಿಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT