ಶಹಜಹಾನ್ ಅವರನ್ನು ಬಂಧಿಸಬಹುದು ಎಂದು ನ್ಯಾಯಾಲಯ ಹೇಳಿದ ಕೂಡಲೇ ಬಂಧಿಸಲಾಗಿದೆ ಎಂದು ಟಿಎಂಸಿ ಹೇಳಿದೆ. ಆದರೆ ಬಿಜೆಪಿಯು ‘ಇದು ಪೂರ್ವಯೋಜಿತ’ ಎಂದು ಟೀಕಿಸಿದೆ. ‘ಕಾನೂನಿನ ತೊಡಕು ಇದ್ದ ಕಾರಣ ಅವರ ಬಂಧನ ತಡವಾಗಿತ್ತು. ಆದರೆ ಬಂಧನಕ್ಕೆ ಯಾವುದೇ ತಡೆ ನೀಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ ಬೆನ್ನಲ್ಲೇ ಬಂಧನ ನಡೆದಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದರು. ‘ಶಹಜಹಾನ್ ಬಂಧನವು ಟಿಎಂಸಿ ಮತ್ತು ಬಂಗಾಳ ಪೊಲೀಸರು ನಡೆಸಿರುವ ನಾಟಕದ ಒಂದು ಭಾಗವಷ್ಟೆ. ಇದು ಪೂರ್ವಯೋಜಿತ ಕೆಲಸ. ಬಿಜೆಪಿ ನಡೆಸಿದ ನಿರಂತರ ಪ್ರತಿಭಟನೆಯಿಂದಾಗಿ ಅವರನ್ನು ಬಂಧಿಸಲಾಗಿದೆ’ ಎಂದು ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಮ್ದಾರ್ ಪ್ರತಿಕ್ರಿಯಿಸಿದ್ದಾರೆ. ‘ಸಿಬಿಐ ಮತ್ತು ಇ.ಡಿಯಿಂದ ರಕ್ಷಣೆ ನೀಡುವ ಉದ್ದೇಶದಿಂದ ಶಹಜಹಾನ್ ಅವರ ಬಂಧನ ನಡೆದಿದೆ. ಬಂಗಾಳ ಪೊಲೀಸರ ಅಸಹಕಾರ ದಿಂದಾಗಿ ಇ.ಡಿ ಅಧಿಕಾರಿಗಳಿಗೆ ಅವರನ್ನು ಇಷ್ಟು ದಿನ ಬಂಧಿಸಲು ಸಾಧ್ಯವಾಗಲಿಲ್ಲ’ ಎಂದರು.