ಕೊಚ್ಚಿ: ದ್ವೀಪಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಪರಿಗಣಿಸಿ ಲಕ್ಷದ್ವೀಪ ಆಡಳಿತವು ಮೇ 31 ರಿಂದ ಇನ್ನೂ ಏಳು ದಿನಗಳವರೆಗೆ ಸಂಪೂರ್ಣ ಲಾಕ್ಡೌನ್ ಅನ್ನು ವಿಸ್ತರಿಸಲಾಗಿದೆ.
ಮೇ 24 ರಂದು ಒಂದು ವಾರ ಸಂಪೂರ್ಣ ಲಾಕ್ಡೌನ್ ಅನ್ನು ಘೋಷಿಸಲಾಗಿತ್ತು. ಲಕ್ಷದ್ವೀಪ ಜಿಲ್ಲಾಧಿಕಾರಿ ಎಸ್. ಅಸ್ಕರ್ ಅಲಿ ಅವರು ಕಿಲ್ತಾನ್, ಚೆಟ್ಲಾಥ್, ಬಿತ್ರಾ, ಕದ್ಮಠ್ ಮತ್ತು ಅಗಟ್ಟಿ ಸೇರಿದಂತೆ ಐದು ದ್ವೀಪಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದ್ದಾರೆ.
ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಜನರ ಓಡಾಟವನ್ನು ನಿಯಂತ್ರಿಸಲು, ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು, ಕಂಟೈನ್ಮೆಂಟ್ ತಂತ್ರಗಾರಿಕೆಯೊಂದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಕಣ್ಗಾವಲು ಮತ್ತು ಗೃಹ ಸಚಿವಾಲಯದ ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಸ್ತುತ ಪರಿಸ್ಥಿತಿಯು ಅಗತ್ಯವಾಗಿದೆ ಎಂದು ಅವರು ಹೇಳಿದರು.
'ನೀರು ಸರಬರಾಜು, ಅಗ್ನಿಶಾಮಕ, ವಿದ್ಯುತ್, ಪೊಲೀಸ್, ಆರೋಗ್ಯ, ವಿಪತ್ತು ನಿರ್ವಹಣೆ, ಹಡಗು ಸಾಗಣೆ, ಅತಿಥಿ ಗೃಹ, ಬಿಎಸ್ಎನ್ಎಲ್, ಕೋವಿಡ್-19 ಅನ್ನು ನಿರ್ವಹಿಸುವ ಜನರು, ಭಾರತೀಯ ನೌಕಾಪಡೆ ಮತ್ತು ಕರಾವಳಿ ಪಡೆ ಸೇರಿದಂತೆ ಹಲವು ಅಗತ್ಯ ಸೇವೆಗಳನ್ನು ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದ್ದು, ಇವರೆಲ್ಲರಿಗೂ ಗುರುತಿನ ಪತ್ರ ಮತ್ತು ಕೋವಿಡ್ ನಕಾರಾತ್ಮಕ ಪರೀಕ್ಷಾ ವರದಿ ಕಡ್ಡಾಯ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ನಿಯಮ ಉಲ್ಲಂಘನೆಯನ್ನು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ- 2015 ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಪ್ರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ಅದು ಹೇಳಿದೆ.
ಅಧಿಕಾರಿಗಳ ಪ್ರಕಾರ, ದ್ವೀಪಗಳಲ್ಲಿ 2,006 ಸಕ್ರಿಯ ಪ್ರಕರಣಗಳಿವೆ. ಕವರಟ್ಟಿ, ಕಲ್ಪೇನಿ, ಆಂಡ್ರೊತ್, ಅಮಿನಿ ಮತ್ತು ಮಿನಿಕೋಯ್ಗಳಲ್ಲಿ ಸಕಾರಾತ್ಮಕ ದರವು ತುಲನಾತ್ಮಕವಾಗಿ ಹೆಚ್ಚಾಗಿದೆ. ಎಲ್ಲಾ ದ್ವೀಪಗಳಲ್ಲಿ ವಿಭಿನ್ನ ಸಮಯ ಮತ್ತು ವಿನಾಯಿತಿಗಳೊಂದಿಗೆ ಜಾರಿಗೊಳಿಸಲಾದ 'ಕೊರೊನಾ ಕರ್ಫ್ಯೂ' ಒಟ್ಟಾರೆ ನಿಯಂತ್ರಣ ತಂತ್ರಗಳಲ್ಲಿ ಪರಿಣಾಮಕಾರಿ ಸಾಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.