ಜೈಪುರ: ರಾಹುಲ್ ಗಾಂಧಿ ಅವರನ್ನು ‘ನವಯುಗ ರಾವಣ’ನಂತೆ ಚಿತ್ರಿಸಿದ ಪೋಸ್ಟರ್ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಅಮಿತ್ ಮಾಳವೀಯಾ ಅವರ ವಿರುದ್ಧ ರಾಜಸ್ಥಾನ ಕಾಂಗ್ರೆಸ್ ನಾಯಕ ಜಸ್ವಂತ್ ಗುರ್ಜರ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 499 (ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸುಳ್ಳು ಆರೋಪ), 500 (ಮಾನನಷ್ಟ), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಬಿಜೆಪಿಯ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಗುರ್ಜರ್ ಅವರು ಜೈಪುರದ ಮೆಟ್ರೊಪಾಲಿಟನ್ ಕೋರ್ಟ್–11ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇದೇ 9ರಂದು ಆಲಿಸಲು ನ್ಯಾಯಾಲಯ ನಿರ್ಧರಿಸಿದೆ.
ರಾಹುಲ್ ಗಾಂಧಿ ಅವರಿಗೆ ಹತ್ತು ತಲೆಗಳಿರುವಂತೆ ಚಿತ್ರಿಸಿ, ಅದಕ್ಕೆ ‘ರಾವಣ’ ಎಂದು ಶೀರ್ಷಿಕೆ ನೀಡಿದ ಪೋಸ್ಟರ್ ಅನ್ನು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ‘ಹೊಸ ಯುಗದ ರಾವಣ ಇಲ್ಲಿದ್ದಾನೆ. ಈತ ದುಷ್ಟ, ಧರ್ಮ ವಿರೋಧಿ. ರಾಮನ ವಿರೋಧಿ. ಈತನ ಗುರಿ ಭಾರತವನ್ನು ನಾಶ ಮಾಡುವುದಾಗಿದೆ’ ಎಂದು ಬರೆದುಕೊಂಡಿತ್ತು.
ಓದಿ: ರಾಹುಲ್ ರಾವಣ, ಮೋದಿ ಸುಳ್ಳುಗಾರ: ಕಾಂಗ್ರೆಸ್ VS ಬಿಜೆಪಿ ವಾಗ್ಯುದ್ಧ
ಇದನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್, ‘ಕೇಸರಿ ಪಕ್ಷದ ಉಗ್ರ ಟೀಕಾಕಾರ ರಾಹುಲ್ ಅವರನ್ನು ಕೊಲ್ಲುವ ನೀಚ ಉದ್ದೇಶವನ್ನು ಬಿಜೆಪಿ ಹೊಂದಿದೆ’ ಎಂದು ಆರೋಪಿಸಿತ್ತು.
ಅರ್ಜಿಯಲ್ಲಿ ಏನಿದೆ?
ಅಕ್ಟೋಬರ್ 5ರಂದು ರಾಹುಲ್ ಗಾಂಧಿ ವಿರುದ್ದ ಪೋಸ್ಟರ್ವೊಂದನ್ನು ಆರೋಪಿಗಳು ಬಿಡುಗಡೆ ಮಾಡಿದ್ದು, ಇದರ ಹಿಂದೆ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಅವಮಾನ ಮಾಡುವ ಮತ್ತು ಅವರಿಗೆ ಹಾನಿ ಮಾಡುವ ಉದ್ದೇಶವಿದೆ. ಆ ಮೂಲಕ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ರಾಮ ವಿರೋಧಿ ಮತ್ತು ಧರ್ಮ ವಿರೋಧಿ ಎಂದು ಬಿಂಬಿಸಿ ಅವರ ವಿರುದ್ಧ ಜನರನ್ನು ಪ್ರಚೋದಿಸುವ ದುರುದ್ದೇಶವೂ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಗುರ್ಜರ್ ಮನವಿ ಮಾಡಿದ್ದಾರೆ.
#WATCH | "The people from the BJP are comparing Rahul Gandhi with 'Raavan' because it has no issues to talk about. They are doing such low-level politics. I have filed a criminal defamation case and the hearing in it is on 9th October," says Rajasthan Congress General Secretary… pic.twitter.com/TEKhxJcs9U
— ANI MP/CG/Rajasthan (@ANI_MP_CG_RJ) October 6, 2023
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.