ನವದೆಹಲಿ: ದೇಶದ ಹಿತದೃಷ್ಟಿಯಿಂದ ಅನ್ನದಾತರು ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂಬುದನ್ನು ಮಗದೊಮ್ಮೆ ಘೋಷಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಈ ಮೂರು ಕೃಷಿ ಕಾಯ್ದೆಗಳು ರೈತರಿಗಷ್ಟೇ ಅಲ್ಲದೆ ದೇಶಕ್ಕೂ ಮಾರಕ ಎಂದು ಹೇಳಿದರು.
ದೇಶದ ಹಿತಕ್ಕಾಗಿ ರೈತರು ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಈ ಮೂರು ಕೃಷಿ ಕಾಯ್ದೆಗಳು ರೈತರು ಹಾಗೂ ಕಾರ್ಮಿಕರಷ್ಟೇ ಅಲ್ಲದೆ ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಫೆಬ್ರವರಿ 6 ಶನಿವಾರದಂದು ದೇಶವ್ಯಾಪಿ ಚಕ್ಕಾ ಜಾಮ್ಗೆ (ರಸ್ತೆ ದಿಗ್ಬಂಧನ) ಕರೆ ನೀಡಿದ್ದಾರೆ. ಅಲ್ಲದೆ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆಗಟ್ಟುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಮೊದಲು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧವೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಸರ್ಕಾರದ ಕೇಂದ್ರ ಸರ್ಕಾರವು, ದೇಶ ಹಾಗೂ ಮನೆಯನ್ನು ಹಾಳು ಮಾಡಿದೆ ಎಂದು ಆರೋಪಿಸಿದರು. ಬಜೆಟ್ ಬಳಿಕ ಇಂಧನ ಬೆಲೆ ಹಾಗೂ ಎಲ್ಪಿಜಿ ಬೆಲೆ ಏರಿಕೆಯಾಗಿದೆ ಎಂಬುದನ್ನು ರಾಹುಲ್ ಗಾಂಧಿ ಉಲ್ಲೇಖಿಸಿದರು.