ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ್ ಮಾತಾ ಕಿ ಜೈ’ ಘೋಷಣೆ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ನಾಯಕಿ

Published 5 ಸೆಪ್ಟೆಂಬರ್ 2023, 15:59 IST
Last Updated 5 ಸೆಪ್ಟೆಂಬರ್ 2023, 15:59 IST
ಅಕ್ಷರ ಗಾತ್ರ

ಜೈಪುರ: ಸಭೆಯೊಂದರಲ್ಲಿ ಪಕ್ಷದ ಕಾರ್ಯಕರ್ತರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಕ್ಕೆ ವಾಗ್ದಂಡನೆ ವಿಧಿಸಿದ ಆರೋಪದಲ್ಲಿ ನಾಯಕಿ ಆರಾಧನಾ ಮಿಶ್ರಾ ಅವರು ವಿವಾದಕ್ಕೊಳಗಾಗಿದ್ದಾರೆ.

ಘಟನೆಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ‘ಕಾಂಗ್ರೆಸ್‌ಗೆ ಈ ದೇಶದ ಬಗ್ಗೆಯಾಗಲೀ, ಸಾಂವಿಧಾನಿಕ ಸಂಸ್ಥೆಗಳ ಬಗ್ಗೆಯಾಗಲೀ ಗೌರವವಿಲ್ಲ. ‘ಭಾರತ್ ಮಾತಾ ಕಿ ಜೈ’ ಘೋಷಣೆ ಕುರಿತು ಏಕೆ ದ್ವೇಷ’ ಎಂದು ಪ್ರಶ್ನಿಸಿದ್ದಾರೆ.

ರಾಜಸ್ಥಾನ ಬಿಜೆಪಿಯ ಯುವಘಟಕವು ಕಾಂಗ್ರೆಸ್ ವಿರುದ್ಧ ಬುಧವಾರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.  

ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಚುನಾವಣಾ ವೀಕ್ಷಕರಾಗಿರುವ ಆರಾಧನಾ ಮಿಶ್ರಾ ಅವರು, ‘ಈ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ಅಭ್ಯರ್ಥಿಯ ಪರವಾಗಿ ಘೋಷಣೆ ಕೂಗದಂತೆ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೆ’ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ವಕ್ತಾರ ಸ್ವರ್ಣಿಮ್ ಚರ್ತುರ್ವೇದಿ ಅವರು, ‘ಮಿಶ್ರಾ ಅವರು ಭಾರತ್ ಕಿ ಜೈ ಘೋಷಣೆ  ಕೂಗುವುದನ್ನು ತಡೆದಿಲ್ಲ’ ಎಂದೂ ಪ್ರತಿಪಾದಿಸಿದ್ದಾರೆ. 

ಘಟನೆಯ ವಿವರ: ಜೈಪುರದ ಆದರ್ಶ ನಗರ ಬ್ಲಾಕ್‌ನಲ್ಲಿ ಸೋಮವಾರ ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜೈಪುರ ವಿಭಾಗದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಅಭ್ಯರ್ಥಿಗಳ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಅಲ್ಲಿ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಆರಾಧನಾ ಮಿಶ್ರಾ ಅವರು ಯಾವೊಬ್ಬ ಅಭ್ಯರ್ಥಿಯ ಪರವಾಗಿ ಘೋಷಣೆ ಕೂಗದಂತೆ ತಾಕೀತು ಮಾಡಿದ್ದರು. 

ಆಗ ಕಾಂಗ್ರೆಸ್ ಕಾರ್ಯಕರ್ತರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದರು. ಮಧ್ಯ ಪ್ರವೇಶಿಸಿದ ಮಿಶ್ರಾ ಅವರು ‘ನಿಮಗೆ ಘೋಷಣೆ ಕೂಗುವ ಅಭಿಮಾನವಿದ್ದರೆ ಕಾಂಗ್ರೆಸ್ ಜಿಂದಾಬಾದ್ ಎಂದು ಘೋಷಣೆ ಕೂಗಿ’ ಎಂದು ಹೇಳಿದ್ದರು. 

ಈ ಸಂಬಂಧ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಲಭೆಯ ಮಧ್ಯೆ ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಿರುವುದು ದಾಖಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT