ಭೋಪಾಲ್:ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ತೂಗುಯ್ಯಾಲೆ ಮಂಗಳವಾರ ಕೊನೆಯ ಕ್ಷಣದವರೆಗೂ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿತ್ತು. ತಡರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿತ್ತು. ಈ ನಡುವೆ ತಡರಾತ್ರಿಯೇ ರಾಜಕೀಯ ನಾಟಕೀಯ ಬೆಳವಣಿಗೆಗಳೂ ನಡೆದಿವೆ.
ಮಧ್ಯಪ್ರದೇಶ ಫಲಿತಾಂಶವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ಕಾಂಗ್ರೆಸ್ ಮುಖಂಡರು ತಡರಾತ್ರಿಯೇ ರಾಜ್ಯಪಾಲರಿಗೆ ಪತ್ರ ಬರೆದು ಸರ್ಕಾರ ರಚನೆಗೆ ಆಹ್ವಾನಿಸುಂತೆ ಕೋರಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ನ ಅಧ್ಯಕ್ಷ ಕಮಲನಾಥ್ ಅವರು ಸರ್ಕಾರ ರಚನೆ ಮಾಡುವ ಕುರಿತು ವಿಶ್ವಾಸ ವ್ಯಕ್ತಪಡಿಸಿ ರಾಜ್ಯಪಾಲರ ಆನಂದಿಬೇನ್ ಪಟೇಲ್ ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ಮಧ್ಯಪ್ರದೇಶ ಕಾಂಗ್ರೆಸ್ನ ಹಿರಿಯ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಆಯೋಗ ಫಲಿತಾಂಶವನ್ನು ಸ್ಪಷ್ಟ ಪಡಿಸಿದ ಬಳಿಕವಷ್ಟೇ ಸರ್ಕಾರ ರಚನೆಗೆ ಅವಕಾಶ ನೀಡಲಾಗುವುದು ಎಂದು ರಾಜ್ಯಪಾಲರು ತಿಳಿಸಿದ್ದಾಗಿ ಎಎನ್ಐ ಟ್ವೀಟ್ ಮಾಡಿದೆ.
ಇಂದು(ಬುಧವಾರ) ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.
ಮಧ್ಯ ಪ್ರದೇಶದ 230 ವಿಧಾನಸಭಾ ಸ್ಥಾನಗಳ ಪೈಕಿ ಸರಳ ಬಹುಮತ ಪಡೆಯುವ 116 ಮ್ಯಾಜಿಕ್ ನಂಬರ್ನತ್ತ ಎರಡೂ ಪಕ್ಷಗಳು ದಾಪುಗಾಲು ಹಾಕಿದ್ದವು. ಇನ್ನೇನು ಮ್ಯಾಜಿಕ್ ನಂಬರ್ ತಲುಪಬೇಕು ಎನ್ನುವಷ್ಟರಲ್ಲಿ ಓಟ ನಿಲ್ಲಿಸಿದವು. ತಡರಾತ್ರಿಯಾದಾಗ ಕಾಂಗ್ರೆಸ್ 114 ಮತ್ತು ಬಿಜೆಪಿ 109 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು.