ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜೀವ್ ಗಾಂಧಿ ಕಾರ್ಯವೈಖರಿಯನ್ನು ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದರು.
‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಭಾರಿ ಬಹುಮತ ಇದ್ದಾಗ್ಯೂ, ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಸಂಸತ್ ಹಾಗೂ ಪ್ರಜಾಪ್ರಭುತ್ವಕ್ಕೂ ಉತ್ತರದಾಯಿಯಾಗಿದ್ದರು’ ಎಂದು ಹೇಳಿದರು.
ರಾಜೀವ್ ಗಾಂಧಿ ಅವರ ಜಯಂತಿ ಅಂಗವಾಗಿ ರಾಜಸ್ಥಾನ ಮೂಲದ ವನಸ್ಥಲಿ ವಿದ್ಯಾಪೀಠಕ್ಕೆ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಮರ್ಪಕವಾದ ಚರ್ಚೆ ನಂತರ ಹಲವಾರು ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಈಗಿರುವ ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಮಸೂದೆಗಳ ಮೇಲೆ ಚರ್ಚೆ ನಡೆಯುವುದು ಬೇಕಿಲ್ಲ. ಹಾಗೆಯೇ ಅಂಗೀಕರಿಸಲಾಗುತ್ತಿದೆ’ ಎಂದರು.
ಪಕ್ಷಾಂತರ ನಿಷೇಧ ಮಸೂದೆ ಬಗ್ಗೆ ವಿರೋಧ ಪಕ್ಷಗಳು ಹಲವು ಆಕ್ಷೇಪಗಳನ್ನು ಎತ್ತಿದ್ದವು. ಅವುಗಳನ್ನು ಒಪ್ಪಿಕೊಂಡಿದ್ದ ರಾಜೀವ್ ಗಾಂಧಿ, ಮಸೂದೆಯಿಂದ ಕೆಲ ಅಂಶಗಳನ್ನು ತೆಗೆದುಹಾಕಿದ್ದರು. ಇದು ಆಗಿನ ಪ್ರಜಾತಾಂತ್ರಿಕ ಸಂಪ್ರದಾಯವಾಗಿತ್ತು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.