ನವದೆಹಲಿ: ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ(ಅ.19) ಪ್ರಕಟಿಸಿದೆ. ಪಟ್ಟಿಯಲ್ಲಿ 88 ಅಭ್ಯರ್ಥಿಗಳ ಹೆಸರುಗಳಿವೆ.
ಪಕ್ಷ ರಾಜ್ಯದ ದಾತಿಯಾ, ಪಿಚೋರ್ ಮತ್ತು ಗೋಟೆಗಾಂವ್ ಕ್ಷೇತ್ರಗಳಲ್ಲಿ ಮೂವರು ಅಭ್ಯರ್ಥಿಗಳನ್ನು ಬದಲಾಯಿಸಿದೆ. ದಾತಿಯಾ ಕ್ಷೇತ್ರದಿಂದ ಅವಧೇಶ್ ನಾಯಕ್ ಬದಲಿಗೆ ರಾಜೇಂದ್ರ ಭಾರ್ತಿ ಅವರನ್ನು ಕಣಕ್ಕಿಳಿಸಿದೆ . ಭಾರ್ತಿ ದಾತಿಯಾ ಕ್ಷೇತ್ರದ ಮಾಜಿ ಶಾಸಕ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾದ ಗೋಟೆಗಾಂವ್ ಕ್ಷೇತ್ರದಲ್ಲಿ ಪಕ್ಷ ಮೊದಲ ಪಟ್ಟಿಯಲ್ಲಿ ಶೇಖರ್ ಚೌಧರಿ ಅವರನ್ನು ಬದಲಿಸಿ ನರ್ಮದಾ ಪ್ರಸಾದ್ ಪ್ರಜಾಪತಿ ಅವರನ್ನು ಕಣಕ್ಕಿಳಿಸಿದೆ. ಅಲ್ಲದೆ ಪಿಚೋರ್ ಕ್ಷೇತ್ರದಿಂದ ಶೈಲೇಂದ್ರ ಸಿಂಗ್ ಬದಲಿಗೆ ಅರವಿಂದ್ ಸಿಂಗ್ ಲೋಧಿಯನ್ನು ಕಣಕ್ಕಿಳಿಸಿದೆ.
ಮೊದಲ ಅಭ್ಯರ್ಥಿ ಪಟ್ಟಿಯಲ್ಲಿ ಪಕ್ಷ 144 ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು. ರಾಜ್ಯ ಘಟಕದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಚಿಂದ್ವಾರದಿಂದ ಕಣಕ್ಕಿಳಿಸಿತು. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ಮಾಜಿ ಉನ್ನತ ಶಿಕ್ಷಣ ಸಚಿವ ಜಿತು ಪಟ್ವಾರಿ, ಜೈವರ್ಧನ್ ಸಿಂಗ್, ಮಧ್ಯಪ್ರದೇಶ ವಿಧಾನಸಭೆಯ ಸದಸ್ಯೆ ವಿಜಯಲಕ್ಷ್ಮಿ ಸಾಧೋ ಮತ್ತು ವಿಧಾನಸಭೆ ಸದಸ್ಯ ಲಕ್ಷ್ಮಣ್ ಸಿಂಗ್ ಮುಂತಾದ ಪ್ರಮುಖ ಹೆಸರುಗಳು ಪಟ್ಟಿಯಲ್ಲಿ ಸೇರಿದ್ದವು .
ಈ ವರ್ಷ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. ರಾಜ್ಯದಲ್ಲಿ ನ.17 ರಂದು ಮತದಾನ ನಡೆಯಲಿದೆ. ಡಿ.3ರಂದು ಮತ ಎಣಿಕೆ ನಡೆಯಲಿದೆ.