‘ಜನರು ಅಭಿವೃದ್ಧಿಯ ‘ಟ್ರೇಲರ್’ ಅನ್ನು ಮಾತ್ರ ನೋಡಿದ್ದು, ಮುಂದಿನ ಐದು ವರ್ಷಗಳ ನೀಲನಕ್ಷೆಯನ್ನು ತಮ್ಮ ಸರ್ಕಾರ ರೂಪಿಸುತ್ತಿದೆ’ ಎಂದು ಉತ್ತರ ಪ್ರದೇಶದ ಮೀರಠ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರತಿಪಾದಿಸಿದರು.
ಲೋಕಸಭಾ ಚುನಾವಣೆ ಘೋಷಣೆ ಆದ ನಂತರ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೀರಠ್ ಅನ್ನು ಚೌಧರಿ ಚರಣ್ಸಿಂಗ್ರಂಥವರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ‘ಕ್ರಾಂತಿಯ ಮತ್ತು ಕ್ರಾಂತಿಕಾರಿಗಳ ನೆಲ’ ಎಂದು ಕೊಂಡಾಡಿದರು.
‘ನಮ್ಮ ಸರ್ಕಾರ ಮೂರನೇ ಅವಧಿಗಾಗಿ ಈಗಾಗಲೇ ತಯಾರಿ ಆರಂಭಿಸಿದೆ. ಆರಂಭದ 100 ದಿನಗಳಲ್ಲಿ ಯಾವ್ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವ ಬಗ್ಗೆ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದರು.
ತಾನು ಬಡತನ ಕಂಡಿರುವುದಾಗಿ ಹೇಳಿದ ಪ್ರಧಾನಿ, ‘ಅದರಿಂದಾಗಿಯೇ ಮೋದಿಗೆ ಬಡವರ ದುಃಖ, ನೋವು, ಸಂಕಷ್ಟ ಚೆನ್ನಾಗಿ ಅರ್ಥವಾಗುತ್ತದೆ. ಹೀಗಾಗಿಯೇ ನಾವು ಬಡವರ ಪ್ರತಿಯೊಂದು ಸಮಸ್ಯೆಯ ಬಗೆಗೂ ಯೋಜನೆಗಳನ್ನು ರೂಪಿಸಿದೆವು. ನಾವು ಬಡವರನ್ನು ಸಬಲೀಕರಣಗೊಳಿಸಿದ್ದಷ್ಟೇ ಅಲ್ಲ, ಅವರಿಗೆ ಆತ್ಮಗೌರವವನ್ನು ಮರಳಿ ತಂದುಕೊಟ್ಟೆವು’ ಎಂದು ತಿಳಿಸಿದರು.
ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ರಾಷ್ಟ್ರೀಯ ಲೋಕ ದಳದ ಜಯಂತ್ ಚೌಧರಿ ಪ್ರಧಾನಿ ಜತೆ ವೇದಿಕೆ ಹಂಚಿಕೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ, ಮೀರಠ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ನಟ ಅರುಣ್ ಗೋವಿಲ್ ರ್ಯಾಲಿಯಲ್ಲಿ ಭಾಗಿಯಾಗಿದ್ದರು.