ವಾರಾಣಸಿ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಪತ್ನಿಯನ್ನು ಸಂತೈಸಲು ಹೋಗಿದ್ದ ಗಂಡನೂ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ಖುಷ್ಬೂ ಸೋನಕರ್ ಎನ್ನುವ 28 ವರ್ಷದ ಮಹಿಳೆ ತನ್ನ ಗಂಡ ಗೋವಿಂದ್ ಸೋನಕರ್ (30) ತುಂಬಾ ಕುಡಿಯುತ್ತಾನೆ ಎಂದು ಮನನೊಂದು ಸಾರಾನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಶಿ ರೈಲ್ವೆ ಕ್ರಾಸಿಂಗ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು.
ವಿಷಯ ತಿಳಿದು ಹೆಂಡತಿಯನ್ನು ಸಮಾಧಾನಪಡಿಸಿ ಕರೆದುಕೊಂಡು ಬರಲು ಗೋವಿಂದ್ ರೈಲು ಹಳಿ ಬಳಿ ಹೋಗಿದ್ದರು. ಈ ವೇಳೆ ಹೆಂಡತಿಯನ್ನು ತಬ್ಬಿಕೊಂಡು ಸಂತೈಸಲು ಮುಂದಾಗಿದ್ದರು. ಆದರೆ, ಇದೇ ವೇಳೆ ರೈಲೊಂದು ಅವರ ಮೇಲೆ ಹಾಯ್ದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮೃತ ದಂಪತಿಗೆ ಒಬ್ಬ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದರು. ಗೋವಿಂದ್ ಸೋನಕರ್ ಹಣ್ಣಿನ ವ್ಯಾಪಾರಿಯಾಗಿದ್ದರು ಎಂದು ಸಾರಾನಾಥ ಪೊಲೀಸ್ ಠಾಣೆ ಅಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.