ನವದಹಲಿ: ನಮಗೆ ನ್ಯಾಯ ಬೇಕು. ನಮ್ಮ ಮಗಳನ್ನು ಕೊಂದವನನ್ನು ನೇಣಿಗೆ ಏರಿಸಬೇಕೆಂದು ಸಹಜೀವನ ಸಂಗಾತಿಯಿಂದಲೇ ಹತ್ಯೆಗೀಡಾದ ದೆಹಲಿಯ ಯುವತಿ ನಿಕ್ಕಿ ಯಾದವ್ ಪೋಷಕರು ಒತ್ತಾಯಿಸಿದ್ದಾರೆ.
ಗೆಳೆಯ ಸಾಹಿಲ್ ಗೆಹಲೋತ್ ಎಂಬಾತ ಆಕೆಯ ಕುತ್ತಿಗೆಗೆ ಡೇಟಾ ಕೇಬಲ್ ಬಿಗಿದು ಹತ್ಯೆ ಮಾಡಿ ಶವವನ್ನು ನೈರುತ್ಯ ದೆಹಲಿಯ ಢಾಬಾದ ಫ್ರಿಡ್ಜ್ನಲ್ಲಿ ಇಟ್ಟಿದ್ದ. ಕೊಲೆಯಾದ 4 ದಿನಗಳ ಮಂಗಳವಾರ ಮೃತದೇಹವನ್ನು ಹೊರತೆಗೆಯಲಾಗಿತ್ತು.
ನಿಕ್ಕಿಯನ್ನು ಕೊಂದು ಶವವನ್ನು ಬಚ್ಚಿಟ್ಟಿದ್ದ ಸಾಹಿಲ್ ಅದೇ ದಿನ ಮತ್ತೊಬ್ಬ ಯುವತಿ ಜೊತೆ ಮದುವೆ ಮಾಡಿಕೊಳ್ಳಲು ತೆರಳಿದ್ದ. ಮಂಗಳವಾರ ಆತನನ್ನು ಬಂಧಿಸಲಾಗಿದೆ.
ಹರಿಯಾಣದ ಝಜ್ಜರ್ ಜಲ್ಲೆಯ ಹಳ್ಳಿಯಿಂದ ಆಗಮಿಸಿದ್ದ ನಿಕ್ಕಿ ಪೋಷಕರು, ಬುಧವಾರ ಇಲ್ಲಿನ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯ ಶವಾಗಾರದ ಮುಂದೆ ಮಗಳ ಮುಖ ನೋಡಲು ಕಾದು ಕುಳಿತಿದ್ದರು.
‘ನಾನು ನನ್ನ ಚೈತನ್ಯವನ್ನೇ ಕಳದುಕೊಂಡಿದ್ದೇನೆ. ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನನ್ನ ಸಹೋದರಿಯ ಸಾವು ದಿಗ್ಭ್ರಾಂತಿಗೊಳಿಸಿದೆ’ ನಿಕ್ಕಿ ಸಹೋದರಿ ಹೇಳಿದ್ದಾರೆ.
ಗುರುಗ್ರಾಮದಲ್ಲಿ ಗ್ಯಾರೇಜ್ ನಡೆಸುತ್ತಿರುವ ನಿಕ್ಕಿಯ ತಂದೆ ಸುನೀಲ್ ಯಾದವ್, ‘ನಮ್ಮ ಮಗಳು ಹೋದಳು, ಅವಳು ಇನ್ನಿಲ್ಲ, ನಮಗೆ ಈಗ ಬೇಕಾಗಿರುವುದು ನ್ಯಾಯ, ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು. ಅವನ ಕ್ರೂರ ಅಪರಾಧಕ್ಕಾಗಿ ಗಲ್ಲಿಗೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ.